ಕೋಲ್ಕತ್ತ: ‘ಭಾರತದ ವಿರುದ್ಧ ಯುದ್ಧ ಘೋಷಿಸುವ ಉದ್ಧಟತನ ಮೆರೆದರೆ ನಾವು ಬ್ರಹ್ಮೋಸ್ ಕ್ಷಿಪಣಿಗಳ ಮೂಲಕ ಉತ್ತರ ನೀಡಬೇಕಾಗುತ್ತದೆ’ ಎಂದು ಬಿಜೆಪಿ ನಾಯಕ ಮಿಥುನ್ ಚಕ್ರವರ್ತಿ ಅವರು ಪಾಕಿಸ್ತಾನಕ್ಕೆ ಮಂಗಳವಾರ ಎಚ್ಚರಿಕೆ ನೀಡಿದ್ದಾರೆ.
ಸಿಂಧೂ ಜಲ ಒಪ್ಪಂದಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಪೀಪಲ್ಸ್ ಪಾರ್ಟಿ ಮುಖ್ಯಸ್ಥ ಬಿಲಾವಲ್ ಭುಟ್ಟೋ ಜರ್ದಾರಿ ನೀಡಿದ್ದ ಹೇಳಿಕೆಗೆ ಮಿಥುನ್ ಈ ಪ್ರತಿಕ್ರಿಯೆ ನೀಡಿದ್ದಾರೆ.
ಸೋಮವಾರ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಭುಟ್ಟೋ ‘ಮೋದಿ ಸರ್ಕಾರಕ್ಕೆ ಒಂದು ಸ್ಪಷ್ಟ ಸಂದೇಶ ನೀಡಬೇಕಿದೆ. ಯುದ್ಧ ನಡೆಯುವುದಾದರೆ ನಾವು ಹಿಂದೆ ಸರಿಯುವುದಿಲ್ಲ, ತಲೆ ಬಾಗುವುದೂ ಇಲ್ಲ. ಸಿಂಧೂ ನದಿಯ ಮೇಲೆ ಆಕ್ರಮಣ ತೋರಲು ನೀವು ಮುಂದಾದರೆ ಪಾಕಿಸ್ತಾನ ಪ್ರತಿಯೊಂದು ಪ್ರಾಂತ್ಯದ ಜನರೂ ನಿಮ್ಮನ್ನು ಎದುರಿಸಲು ಮುಂದಾಗಬೇಕಾಗುತ್ತದೆ’ ಎಂದು ಹೇಳಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮಿಥುನ್ ‘ಪಾಕಿಸ್ತಾನದ ಜನರು ಯುದ್ಧ ಬಯಸುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಆದರೆ, ಪದೇ ಪದೇ ಈ ಉದ್ಧಟತನ ಮುಂದುವರಿದರೆ ನಮ್ಮ ತಾಳ್ಮೆ ಕುಂದುತ್ತದೆ. ಆಗ ಸರಣಿ ಬ್ರಹ್ಮೋಸ್ ಮೂಲಕ ನಾವು ಪ್ರತಿಕ್ರಿಯೆ ನೀಡಬೇಕಾಗುತ್ತದೆ. ಜತೆಗೆ ನಮ್ಮ ದೇಶದ 140 ಕೋಟಿ ಜನರು ತಮ್ಮನ್ನು ತಾವು ಸಮರ್ಪಿಸಿಕೊಂಡು ಅಣೆಕಟ್ಟು ಕಟ್ಟುತ್ತೇವೆ. ಒಂದು ಬಾರಿ ಆ ಅಣೆಕಟ್ಟು ತೆರೆದರೆ ಒಂದೇ ಒಂದು ಗುಂಡು ಹಾರಿಸದೆಯೂ ಸುನಾಮಿ ಸೃಷ್ಟಿಯಾಗುತ್ತದೆ’ ಎಂದಿದ್ದಾರೆ.
‘ಜತೆಗೆ ಈ ಮಾತನ್ನು ನಾನು ಪಾಕಿಸ್ತಾನದ ಸಾಮಾನ್ಯ ಜನರಿಗೆ ಹೇಳುತ್ತಿರುವುದಲ್ಲ, ಭುಟ್ಟೋಗೆ ಹೇಳುತ್ತಿರುವುದು’ ಎಂದೂ ಸ್ಪಷ್ಟನೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.