ADVERTISEMENT

ಬಾಲಾಕೋಟ್ ಹೀರೋ ಅಭಿನಂದನ್ ವರ್ಧಮಾನ್‌ಗೆ ಗ್ರೂಪ್ ಕ್ಯಾಪ್ಟನ್ ಆಗಿ ಬಡ್ತಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ನವೆಂಬರ್ 2021, 13:51 IST
Last Updated 3 ನವೆಂಬರ್ 2021, 13:51 IST
ಅಭಿನಂದನ್ ವರ್ಧಮಾನ್‌
ಅಭಿನಂದನ್ ವರ್ಧಮಾನ್‌   

ನವದೆಹಲಿ: ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್, ಬಾಲಾಕೋಟ್ ವೈಮಾನಿಕ ದಾಳಿಯ ಹೀರೋ ಅಭಿನಂದನ್ ವರ್ಧಮಾನ್‌ ಅವರಿಗೆ ಗ್ರೂಪ್ ಕ್ಯಾಪ್ಟನ್ ಆಗಿ ಬಡ್ತಿ ನೀಡಲಾಗಿದೆ ಎಂದು ‘ಎಎನ್‌ಐ’ ಸುದ್ದಿಸಂಸ್ಥೆ ಟ್ವೀಟ್ ಮಾಡಿದೆ.

ಗ್ರೂಪ್ ಕ್ಯಾಪ್ಟನ್ ಹುದ್ದೆಯು ಭಾರತೀಯ ಸೇನೆಯ ಕರ್ನಲ್ ಹುದ್ದೆಗೆ ಸಮನಾಗಿದೆ ಎಂದು ವರದಿ ಉಲ್ಲೇಖಿಸಿದೆ.

ಸಿಆರ್‌ಪಿಎಫ್‌ ಯೋಧರ ಮೇಲೆ ಪುಲ್ವಾಮಾದಲ್ಲಿ ನಡೆದಿದ್ದ ಭಯೋತ್ಪಾದನಾ ದಾಳಿಯ ನಂತರ ಬಾಲಾಕೋಟ್‌ನ ಉಗ್ರ ನೆಲೆಗಳ ಮೇಲೆ ಭಾರತೀಯ ವಾಯುಪಡೆ ದಾಳಿ ನಡೆಸಿತ್ತು. ಇದಕ್ಕೆ ಪ್ರತಿಕಾರವಾಗಿ ದಾಳಿ ನಡೆಸುವ ಉದ್ದೇಶದಿಂದ 2019ರ ಫೆ.27ರಂದು ಭಾರತದ ವಾಯುಗಡಿ ದಾಟಿ ಬಂದಿದ್ದ ಪಾಕಿಸ್ತಾನದ ಎಫ್‌–16 ಯುದ್ಧ ವಿಮಾನಗಳನ್ನು ಮಿಗ್‌–21 ಯುದ್ಧ ವಿಮಾನದ ಮೂಲಕ ವಿಂಗ್ ಕಮಾಂಡರ್‌ ಅಭಿನಂದನ್‌ ಬೆನ್ನಟ್ಟಿ ಹೋಗಿದ್ದರು. ಈ ಕಾಳಗದಲ್ಲಿ ಅಭಿನಂದನ್‌ ಅವರು ಪಾಕ್‌ನ ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದರಾದರೂ ತಾವಿದ್ದ ವಿಮಾನ ಪತನಗೊಂಡು ಪಾಕಿಸ್ತಾನಕ್ಕೆ ಸೆರೆ ಸಿಕ್ಕಿದ್ದರು. ಭಾರತ ಸರ್ಕಾರ ಮತ್ತು ಅಂತರರಾಷ್ಟ್ರೀಯ ಸಮುದಾಯದ ತೀವ್ರ ಒತ್ತಡದ ಹಿನ್ನೆಲೆಯಲ್ಲಿ ಅವರನ್ನು ಮಾರ್ಚ್‌ 1ರ ರಾತ್ರಿ ಪಾಕಿಸ್ತಾನ ಬಿಡುಗಡೆ ಮಾಡಿತ್ತು.

ADVERTISEMENT

ಬಾಲಾಕೋಟ್ ದಾಳಿಯ ಸಂದರ್ಭ ಪ್ರದರ್ಶಿಸಿದ ಸಾಹಸಕ್ಕಾಗಿ ಅಭಿನಂದನ್ ಅವರಿಗೆ ಈ ಹಿಂದೆಯೇ ಶೌರ್ಯಚಕ್ರ ನೀಡಿ ಗೌರವಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.