ADVERTISEMENT

ಕೇರಳ: ಮಲಂಬುಳ ಬೆಟ್ಟದಲ್ಲಿ ಸಿಲುಕಿದ್ದ ಯುವಕನ ರಕ್ಷಿಸಿದ ಸೇನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಫೆಬ್ರುವರಿ 2022, 5:42 IST
Last Updated 9 ಫೆಬ್ರುವರಿ 2022, 5:42 IST
ಚಾರಣಕ್ಕೆ ತೆರಳಿದ್ದ ಯುವಕನ ರಕ್ಷಣೆ
ಚಾರಣಕ್ಕೆ ತೆರಳಿದ್ದ ಯುವಕನ ರಕ್ಷಣೆ   

ಪಾಲಕ್ಕಾಡ್: ಕೇರಳದ ಮಲಂಬುಳ ಪರ್ವತಗಳ ಕಡಿದಾದ ಬೆಟ್ಟದ ಬಂಡೆಕಲ್ಲಿನ ನಡುವೆ ಸಿಲುಕಿದ್ದ ಯುವಕನನ್ನು ಸತತ ಕಾರ್ಯಾಚರಣೆಯ ಬಳಿಕ ಭಾರತೀಯ ಸೇನೆಯು ಬುಧವಾರ ರಕ್ಷಿಸುವಲ್ಲಿ ಯಶಸ್ವಿಯಾಗಿದೆ.

ಮಲಂಬುಳದ 23 ವರ್ಷದ ಬಾಬು ಎಂಬ ಯುವಕ, ಸೋಮವಾರ (ಫೆ.8) ಮೂವರು ಸ್ನೇಹಿತರ ಜೊತೆಗೆ ಚಾರಣಕ್ಕೆ ತೆರಳಿದ್ದನು. ಬಳಿಕ ಕಾಲು ಜಾರಿ ಕಡಿದಾದ ಬೆಟ್ಟದ ನಡುವೆ ಸಿಲುಕಿದ್ದನು.

ಸುಮಾರು 1,000 ಮೀಟರ್ ಎತ್ತರದ ಬೆಟ್ಟ ಇದಾಗಿದೆ. ಕಳೆದೆರಡು ದಿನಗಳಿಂದ ನೀರು, ಆಹಾರ ಇಲ್ಲದೆ ಸಂಕಷ್ಟಕ್ಕೊಳಗಾಗಿದ್ದನು.

ಹೆಲಿಕಾಪ್ಟರ್ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಸುವಪ್ರಯತ್ನ ಪ್ರತಿಕೂಲ ಹವಾಮಾನದಿಂದಾಗಿ ವಿಫಲಗೊಂಡಿತ್ತು. ಅಲ್ಲದೆ ಡ್ರೋನ್ ಮೂಲಕ ಯುವಕನಿಗೆ ಆಹಾರ ತಲುಪಿಸುವ ಪ್ರಯತ್ನ ವಿಫಲಗೊಂಡಿತ್ತು.

ಅಂತಿಮವಾಗಿ ಮಂಗಳವಾರ ರಾತ್ರಿ ಕೇರಳ ಸರ್ಕಾರದ ಮನವಿ ಮೇರೆಗೆ ಭಾರತೀಯ ಸೇನೆಯು ಯಶಸ್ವಿಯಾಗಿ ರಕ್ಷಣಾ ಕಾರ್ಯಾಚರಣೆಯನ್ನು ನಡೆಸಿದೆ.

ಮಂಗಳವಾರ ರಾತ್ರಿ ಭಾರತೀಯ ಸೇನೆಯ ಎರಡು ತಂಡಗಳನ್ನು ರಕ್ಷಣಾ ಕಾರ್ಯಾಚರಣೆಗಾಗಿ ನಿಯೋಜಿಸಿತ್ತು.

ಮದ್ರಾಸ್ ರೆಜಿಮೆಂಟ್‌ನ 12 ಮಂದಿಯ ತಂಡದಲ್ಲಿ ಪರ್ವತಾರೋಹಿಗಳು ಸೇರಿದಂತೆ ನುರಿತ ಸಿಬ್ಬಂದಿಗಳು ಒಳಗೊಂಡಿದ್ದರು. ಹಾಗೆಯೇ ಬೆಂಗಳೂರಿನ ಪ್ಯಾರಾಚೂಟ್ ರೆಜಿಮೆಂಟ್ ಸೆಂಟರ್‌ನಿಂದ ತೆರಳಿರುವ 22 ಸಿಬ್ಬಂದಿಯ ಎರಡನೇ ತಂಡವು ವಿಮಾನ ಮಾರ್ಗವಾಗಿ ಸೂಲೂರು ಮೂಲಕ ಘಟನಾ ಸ್ಥಳಕ್ಕೆ ತಲುಪಿತ್ತು.

ಯುವಕನನ್ನು ರಕ್ಷಿಸಿದ ಬಳಿಕ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.