ಶ್ರೀನಗರ: ಉಗ್ರರ ನೆಲೆಗಳ ಮೇಲೆ ಹಾಗೂ ಪಾಕಿಸ್ತಾನ ಅಪ್ರಚೋದಕ ದಾಳಿಗೆ ಮುಂದಾಗಿರುವ ಪ್ರದೇಶಗಳಲ್ಲಿ ಭಾರತೀಯ ಸೇನೆ ಕಾರ್ಯಾಚರಣೆ ನಡೆಸಿದ್ದು ತಕ್ಕ ಉತ್ತರ ನೀಡಿರುವುದಾಗಿ ಸೇನೆ ಶುಕ್ರವಾರ ತಿಳಿಸಿದೆ.
ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯ ಸಮೀಪ ಎರಡು ಸ್ಥಳಗಳಲ್ಲಿ ಭಾರತೀಯ ಸೇನೆ ದಾಳಿ ನಡೆಸಿದ್ದು, ವಿಡಿಯೊ ಸಹ ಬಿಡುಗಡೆ ಮಾಡಲಾಗಿದೆ. ಕದನ ವಿರಾಮ ಉಲ್ಲಂಘಿಸಿ ಕೆರನ್ ವಲಯದಲ್ಲಿ ಅಪ್ರಚೋದಕ ದಾಳಿ ನಡೆಸಿರುವುದಕ್ಕೆ ಭಾರತೀಯ ಸೇನೆ ಇಂದು ಮಧ್ಯಾಹ್ನ ಸೂಕ್ತ ಪ್ರತ್ಯುತ್ತರ ನೀಡಿದೆ ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ.
ಗಡಿ ನಿಯಂತ್ರಣ ರೇಖೆ ಉದ್ದಕ್ಕೂ ಶಸ್ತ್ರಾಸ್ತ್ರ ಸಂಗ್ರಹ ಪ್ರದೇಶಗಳು, ಉಗ್ರರ ನೆಲೆಗಳು ಹಾಗೂ ದಾಳಿಗೆ ಸಜ್ಜಾಗಿದ್ದ ಪ್ರದೇಶಗಳ ಮೇಲೆ ದಾಳಿ ನಡೆಸಲಾಗಿದೆ. ಶತ್ರು ವಲಯಗಳಲ್ಲಿ ಭಾರೀ ಹಾನಿ ಉಂಟಾಗಿರುವುದು ವರದಿಯಾಗಿದೆ ಎಂದಿದ್ದಾರೆ.
ಪಾಕಿಸ್ತಾನವು ಉರಿ ಪ್ರದೇಶ ಬರಾಮುಲ್ಲ ಜಿಲ್ಲೆಯಲ್ಲಿಯೂ ಅಪ್ರಚೋದಕ ದಾಳಿ ನಡೆಸಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಭಾರತ ಮತ್ತು ಪಾಕಿಸ್ತಾನದಲ್ಲಿ ಕೊರೊನಾ ವೈರಸ್ ಸಾಂಕ್ರಾಮಿಕ ನಿಯಂತ್ರಣ ಹೋರಾಟಗಳತ್ತ ಗಮನ ಹರಿದಿದ್ದರೂ, ಪಾಕಿಸ್ತಾನ ಕದನ ವಿರಾಮ ಉಲ್ಲಂಘನೆ ಮಾಡಿ ಅಪ್ರಚೋದಕ ದಾಳಿ ನಡೆಸುತ್ತಿರುವುದು ಹೆಚ್ಚಿದೆ.
ಪೂಂಚ್ ಜಿಲ್ಲೆಯಲ್ಲಿ ಶೆಲ್ ದಾಳಿಗಳು ಹಾಗೂ ಇತರೆ ಶಸ್ತ್ರಾಸ್ತ್ರಗಳ ದಾಳಿ ವಾರದಿಂದಲೂ ನಡೆಯುತ್ತಿದೆ. ಕಳೆದ ವಾರ ಸುಂದರ್ಬನಿ–ನೌಶೆರಾ ವಲಯದಲ್ಲಿ ಆರು ಮಂದಿ ರಕ್ಷಣಾ ಸಿಬ್ಬಂದಿ ಅಪ್ರಚೋದಕ ದಾಳಿಯಿಂದಾಗಿ ಗಾಯಗೊಂಡಿದ್ದರು.
ಈ ವರ್ಷ ಜನವರಿ 1ರಿಂದ ಫೆಬ್ರುವರಿ 23ರ ವರೆಗೂ ಪಾಕಿಸ್ತಾನ ಕನಿಷ್ಠ 646 ಬಾರಿ ಕದನ ವಿರಾಮ ಉಲ್ಲಂಘನೆ ಮಾಡಿದೆ ಎಂದು ರಕ್ಷಣಾ ಖಾತೆ ರಾಜ್ಯ ಸಚಿವ ಶ್ರೀಪಾದ್ ನಾಯಕ್ ಮಾರ್ಚ್ನಲ್ಲಿ ಸಂಸತ್ತಿಗೆ ತಿಳಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.