ADVERTISEMENT

ಭಾರತದ ರಾಜಕೀಯ ಪಕ್ಷಗಳಿಂದ ವಾಟ್ಸ್‌ಆ್ಯಪ್ ದುರ್ಬಳಕೆ: ಸೇವೆ ಸ್ಥಗಿತದ ಎಚ್ಚರಿಕೆ

ಸಾಮಾಜಿಕ ಸಂದೇಶ ಕಂಪನಿಯಿಂದ ಆರೋಪ

ರಾಯಿಟರ್ಸ್
Published 6 ಫೆಬ್ರುವರಿ 2019, 14:21 IST
Last Updated 6 ಫೆಬ್ರುವರಿ 2019, 14:21 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ‘ಭಾರತೀಯ ರಾಜಕೀಯ ಪಕ್ಷಗಳು ವಾಟ್ಸ್‌ಆ್ಯಪ್‌ ಅನ್ನು ದುರ್ಬಳಕೆ ಮಾಡಿಕೊಳ್ಳುತ್ತಿವೆ’ ಎಂದು ವಾಟ್ಸ್‌ಆ್ಯಪ್‌ ಸಾರ್ವಜನಿಕ ಸಂಪರ್ಕಾಧಿಕಾರಿ ಕಾರ್ಲ್ ವೂಗ್ ಆರೋಪಿಸಿದ್ದಾರೆ.

‘ಕೆಲವೇ ತಿಂಗಳಲ್ಲಿ ಭಾರತದಲ್ಲಿ ಚುನಾವಣೆ ನಡೆಯಲಿದೆ. ಆಗ ವಾಟ್ಸ್‌ಆ್ಯಪ್‌ ಅನ್ನು ಮತ್ತಷ್ಟು ದುರ್ಬಳಕೆ ಮಾಡಿಕೊಳ್ಳುವ ಅಪಾಯವಿದೆ. ಅದನ್ನು ತಡೆಹಿಡಿಯಲು ಪ್ರಯತ್ನಿಸುತ್ತಿದ್ದೇವೆ’ ಎಂದು ವೂಗ್ ಹೇಳಿದ್ದಾರೆ.

ಯಾವ ರಾಜಕೀಯ ಪಕ್ಷಗಳು ವಾಟ್ಸ್ಆ್ಯಪ್‌ ಅನ್ನು ದುರ್ಬಳಕೆ ಮಾಡಿಕೊಳ್ಳುತ್ತಿವೆ ಎಂಬ ವಿವರ ಮತ್ತು ದುರ್ಬಳಕೆಯ ಸ್ವರೂಪವನ್ನು ಬಹಿರಂಗಪಡಿಸಲು ಅವರು ನಿರಾಕರಿಸಿದ್ದಾರೆ.

ADVERTISEMENT

‘ವಾಟ್ಸ್‌ಆ್ಯಪ್‌ನ ಉದ್ದೇಶಿತ ಬಳಕೆಗೆ ವ್ಯತಿರಿಕ್ತವಾದ ರೀತಿಯಲ್ಲಿ ಅದನ್ನು ರಾಜಕೀಯ ಪಕ್ಷಗಳು ಬಳಸಿಕೊಳ್ಳುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಈ ಬಗ್ಗೆ ಆ ಪಕ್ಷಗಳ ಜತೆಗೆ ಮಾತುಕತೆ ನಡೆಸಿದ್ದೇವೆ. ಈ ರೀತಿಯ ದುರ್ಬಳಕೆಯನ್ನು ನಿಲ್ಲಿಸಿ ಎಂದು ತಿಳಿಸಿದ್ದೇವೆ. ದುರ್ಬಳಕೆ ಮುಂದುವರಿದರೆ ಭಾರತದಲ್ಲಿ ನಮ್ಮ ಸೇವೆಯನ್ನೇ ಸ್ಥಗಿತಗೊಳಿಸಬೇಕಾಗುತ್ತದೆ’ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಭಾರತದಲ್ಲಿ ವಾಟ್ಸ್‌ಆ್ಯಪ್‌ ಅನ್ನು ಪ್ರಚಾರದ ಸಾಧನದಂತೆ ಬಳಸಿಕೊಳ್ಳಲಾಗುತ್ತಿದೆ. ಆದರೆ ಅದು ಪ್ರಚಾರದ ಸಾಧನವಲ್ಲ. ಇದನ್ನು ರಾಜಕೀಯ ಪಕ್ಷಗಳಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ ಎಂದು ಅವರು ಹೇಳಿದ್ದಾರೆ.

ವಿಶ್ವದಲ್ಲಿ ವಾಟ್ಸ್‌ಆ್ಯಪ್‌ಗೆ 150 ಕೋಟಿಗೂ ಹೆಚ್ಚು ಬಳಕೆದಾರರಿದ್ದಾರೆ. 2018ರಲ್ಲಿ ಭಾರತದಲ್ಲಿಸುಳ್ಳು ಸುದ್ದಿ ಹಬ್ಬಿಸಲು ವಾಟ್ಸ್‌ಆ್ಯಪ್‌ ಅನ್ನು ಬಳಸಿಕೊಳ್ಳಲಾಗಿತ್ತು. ಈ ಸುಳ್ಳು ಸುದ್ದಿಗಳು ಮತ್ತು ವದಂತಿಗಳಿಂದ ಹಲವು ಗುಂಪು ಹತ್ಯೆಗಳು ನಡೆದಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.