ಸಾಂದರ್ಭಿಕ ಚಿತ್ರ
ಹೈದರಾಬಾದ್: ಅಮೆರಿಕದ ಗ್ಯಾಸ್ ಸ್ಟೇಷನ್ನಲ್ಲಿ ಕೆಲಸ ಮಾಡುತ್ತಿದ್ದ ತೆಲಂಗಾಣದ ಖಮ್ಮಂ ಜಿಲ್ಲೆಯ ವಿದ್ಯಾರ್ಥಿಯನ್ನು ದುಷ್ಕರ್ಮಿಗಳು ಶನಿವಾರ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
ಸಾಯಿ ತೇಜ ನೂಕರಾಪು (22) ಮೃತ ವಿದ್ಯಾರ್ಥಿ. ಷಿಕಾಗೊ ಬಳಿಯ ಗ್ಯಾಸ್ ಸ್ಟೇಷನ್ನಲ್ಲಿ ಭಾರತೀಯ ಕಾಲಮಾನ ಶನಿವಾರ ನಸುಕಿನಲ್ಲಿ ಕೆಲಸ ಮಾಡುತಿದ್ದ ಈತನ ಮೇಲೆ ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ ಎಂದು ಪ್ರಾಥಮಿಕ ಮಾಹಿತಿ ಉಲ್ಲೇಖಿಸಿ ಬಿಆರ್ಎಸ್ ಪಕ್ಷದ ಎಂಎಲ್ಸಿ ಮಧುಸೂದನ್ ತಾಥಾ ತಿಳಿಸಿದ್ದಾರೆ.
ಸಾಯಿ ತೇಜ ಅವರ ಖಮ್ಮಮ್ ಬಳಿಯ ನಿವಾಸದಲ್ಲಿ ಅವರ ಪೋಷಕರನ್ನು ಭೇಟಿ ಮಾಡಿದ ಮಧುಸೂದನ್, ‘ಅಗತ್ಯ ನೆರವು ನೀಡುವಂತೆ ತೆಲುಗು ಅಸೋಸಿಯೇಶನ್ ಆಫ್ ನಾರ್ತ್ ಅಮೆರಿಕ (ತಾನಾ) ಸದಸ್ಯರೊಂದಿಗೆ ಮಾತನಾಡಿದ್ದೇನೆ. ವಿದ್ಯಾರ್ಥಿಯ ಮೃತದೇಹ ಮುಂದಿನ ವಾರ ಭಾರತ ತಲುಪುವ ನಿರೀಕ್ಷೆಯಿದೆ’ ಎಂದು ಅವರು ತಿಳಿಸಿದ್ದಾರೆ.
‘ಭಾರತದಲ್ಲಿ ಬಿಬಿಎ ಮುಗಿಸಿ ಅಮೆರಿಕಕ್ಕೆ ತೆರಳಿದ್ದ ಸಾಯಿ ತೇಜ ಅವರು ಅಲ್ಲಿ ಎಂಬಿಎ ಓದುತ್ತಿದ್ದರು. ಅಲ್ಲಿ ಅರೆಕಾಲಿಕ ಕೆಲಸ ಮಾಡುತ್ತಿದ್ದರು. ತನ್ನ ಕೆಲಸ ಮುಗಿದ ಮೇಲೆ, ಸ್ನೇಹಿತನಿಗೆ ಸಹಾಯ ಮಾಡಲು ಕೆಲಸದ ಸ್ಥಳದಲ್ಲಿಯೇ ಇದ್ದಾಗ, ದುಷ್ಕರ್ಮಿಗಳು ಗುಂಡು ಹಾರಿಸಿರುವುದು ತಿಳಿದು ಬೇಸರವಾಗಿದೆ’ ಎಂದು ಸಂಬಂಧಿಕರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.