
ನವದೆಹಲಿ: ‘ಡಿ. 3, 4 ಮತ್ತು 5ರಂದು ನಮ್ಮ ವಿಮಾನಗಳ ಹಾರಾಟ ರದ್ದಾದ ಮತ್ತು ವಿಳಂಬವಾದ ಕಾರಣ ಬಹಳ ಹೊತ್ತಿನವರೆಗೆ ವಿಮಾನ ನಿಲ್ದಾಣಗಳಲ್ಲಿಯೇ ಸಿಲುಕಿದ್ದ ಪ್ರತಿಯೊಬ್ಬ ಪ್ರಯಾಣಿಕನಿಗೂ ₹10 ಸಾವಿರ ಮೊತ್ತದ ವೋಚರ್ ನೀಡಲಾಗುವುದು’ ಎಂದು ಇಂಡಿಗೊ ಸಂಸ್ಥೆಯು ಗುರುವಾರ ಘೋಷಿಸಿದೆ.
‘ನಮ್ಮ ಕಾರಣದಿಂದ ತೀವ್ರ ತೊಂದರೆಗೆ ಒಳಗಾದ ಪ್ರಯಾಣಿಕರಿಗಾಗಿಯೇ ಈ ವೋಚರ್ ನೀಡಲಾಗುತ್ತಿದೆ. ಈ ವೋಚರ್ ಅನ್ನು ಮುಂದಿನ 12 ತಿಂಗಳ ಒಳಗಾಗಿ ಬಳಕೆ ಮಾಡಿಕೊಳ್ಳಬಹುದು. ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದ (ಡಿಜಿಸಿಎ) ನಿಯಮಗಳ ಅನ್ವಯ ನೀಡುತ್ತಿರುವ ಪರಿಹಾರದ ಜೊತೆಗೆ ನೀಡುತ್ತಿರುವ ಹೆಚ್ಚುವರಿ ಪರಿಹಾರ ಇದಾಗಿದೆ’ ಎಂದೂ ಸಂಸ್ಥೆ ಹೇಳಿದೆ.
‘ವಿಮಾನ ಹಾರಾಟ ಆರಂಭಕ್ಕೆ ನಿಗದಿಯಾಗಿದ್ದ ಸಮಯದ 24 ಗಂಟೆಗಳ ಒಳಗೆ ವಿಮಾನ ಹಾರಾಟವನ್ನು ರದ್ದು ಮಾಡಿದ್ದರೆ ಮತ್ತು ವಿಮಾನ ಟೇಕ್ ಆಫ್ ಆಗಿ ಲ್ಯಾಂಡಿಂಗ್ ಆಗುವವರೆಗಿನ ಸಮಯದ ಆಧಾರದಲ್ಲಿ ಪ್ರತಿ ಪ್ರಯಾಣಿಕನಿಗೂ ₹5 ಸಾವಿರದಿಂದ ₹10 ಸಾವಿರವನ್ನು ಇಂಡಿಗೊ ನೀಡುತ್ತಿದೆ. ಇದನ್ನು ಸರ್ಕಾರದ ಮಾರ್ಗಸೂಚಿಯ ಆಧಾರದಲ್ಲೇ ನೀಡಲಾಗುತ್ತಿದೆ. ಇದಕ್ಕೂ ಹೆಚ್ಚಿನ ಪರಿಹಾರ ರೂಪವಾಗಿ ವೋಚರ್ ನೀಡಲಾಗುತ್ತಿದೆ’ ಎಂದಿದೆ.
ಮೇಲ್ವಿಚಾರಣೆ ತಂಡ ನಿಯೋಜನೆ: ಇಂಡಿಗೊದ ಕಾರ್ಯವೈಖರಿಯ ಮೇಲೆ ನಿಗಾ ಇರಿಸಲು ಡಿಜಿಸಿಎ ತಂಡವೊಂದನ್ನು ನಿಯೋಜಿಸಲು ನಿರ್ಧರಿಸಿದೆ. ಈ ತಂಡವು ಗುರುಗ್ರಾಮದ ಇಂಡಿಗೊ ಕೇಂದ್ರ ಕಚೇರಿಯಲ್ಲಿಯೇ ಕಾರ್ಯನಿರ್ವಹಿಸಲಿದೆ. ವಿಮಾನಗಳ ಹಾರಾಟ ರದ್ದತಿ, ವಿಮಾನ ಸಿಬ್ಬಂದಿ ನಿಯೋಜನೆ, ಯೋಜನೆಯೇ ಇಲ್ಲದೆ ರಜೆ ಹಾಕುವುದು, ಸಿಬ್ಬಂದಿ ಕೊರತೆಯಿಂದ ಯಾವ ಮಾರ್ಗದಲ್ಲಿ ತೊಂದರೆಯಾಗುತ್ತಿದೆ, ಪರಿಹಾರ ನೀಡುತ್ತಿರುವ ಪ್ರಕ್ರಿಯೆ, ಲಗೇಜ್ಗಳ ಮರಳಿಸುವಿಕೆ– ಹೀಗೆ ಎಲ್ಲವನ್ನೂ ಈ ತಂಡ ಮೇಲ್ವಿಚಾರಣೆ ನಡೆಸಲಿದೆ. ಈ ತಂಡವು ಪ್ರತಿದಿನವೂ ಡಿಜಿಸಿಎಗೆ ವರದಿ ನೀಡಬೇಕು.
ದೇಶದ ಎಲ್ಲ 11 ವಿಮಾನ ನಿಲ್ದಾಣಗಳಿಗೆ ತೆರಳಿ ಡಿಜಿಸಿಎದ ಹಿರಿಯ ಅಧಿಕಾರಿಗಳು ಪರಿಶೀಲನೆ ನಡೆಸಲಿದ್ದಾರೆ. ಮುಂದಿನ 2–3 ದಿನಗಳಲ್ಲಿ ಎಲ್ಲ ಅಧಿಕಾರಿಗಳು ಅವರಿಗೆ ನೀಡಿರುವ ನಿಲ್ದಾಣಗಳಿಗೆ ತೆರಳಿ, 24 ಗಂಟೆಗಳ ಒಳಗೆ ವರದಿ ನೀಡಲಿದ್ದಾರೆ ಎಂದು ಡಿಜಿಸಿಎ ಬುಧವಾರ ಹೇಳಿಕೆ ಬಿಡುಗಡೆ ಮಾಡಿದೆ.
‘ಮಾಹಿತಿ ನೀಡಿ
‘ಒಂದು ವೇಳೆ ನೀವು ಟ್ರಾವೆಲ್ ಏಜೆನ್ಸಿಗಳಿಂದ ಇಂಡಿಗೊ ಟಿಕೆಟ್ ಬುಕ್ ಮಾಡಿಕೊಂಡಿದ್ದರೆ ಆ ಪ್ರಯಾಣಿಕರ ಸಂಪೂರ್ಣ ಮಾಹಿತಿ ನಮ್ಮ ಬಳಿ ಇಲ್ಲ. ಇದರಿಂದ ಪರಿಹಾರ ತಲುಪಿಸುವುದು ಕಷ್ಟಕರವಾಗಲಿದೆ. ಆದ್ದರಿಂದ ಏಜೆನ್ಸಿ ಮೂಲಕ ಟಿಕೆಟ್ ಬುಕ್ ಮಾಡಿರುವ ಪ್ರಯಾಣಿಕರು ನಿಮ್ಮ ಮಾಹಿತಿಯನ್ನು customer.experience@goindigo.in ಮೂಲಕ ನಮಗೆ ನೀಡಿ’ ಎಂದು ಇಂಡಿಗೊ ಸಂಸ್ಥೆ ಪ್ರಯಾಣಿಕರಲ್ಲಿ ಮನವಿ ಮಾಡಿಕೊಂಡಿದೆ.
‘ಆಂತರಿಕ ಮತ್ತು ಬಾಹ್ಯ ಘಟನೆಗಳಿಂದ ತೊಂದರೆ’
ಬಿಕ್ಕಟ್ಟು ಆರಂಭವಾದ ಹತ್ತು ದಿನಗಳ ಬಳಿಕ ಇದೇ ಮೊದಲ ಬಾರಿಗೆ ಬುಧವಾರ ಇಂಡಿಗೊ ಸಂಸ್ಥೆ ಮುಖ್ಯಸ್ಥ ವಿಕ್ರಂ ಸಿಂಗ್ ಮೆಹ್ತಾ ಪ್ರತಿಕ್ರಿಯೆ ನೀಡಿದ್ದಾರೆ. ‘ನಮ್ಮಿಂದಾದ ತೊಂದರೆಗೆ ಕ್ಷಮೆ ಕೇಳುತ್ತೇವೆ. ಆಂತರಿಕವಾದ ಮತ್ತು ಬಾಹ್ಯವಾದ ಅನಿರೀಕ್ಷಿತ ಘಟನಾವಳಿಗಳಿಂದ ಇಂಥ ದೊಡ್ಡ ಮಟ್ಟದ ಬಿಕ್ಕಟ್ಟು ತೊಂದರೆ ಉದ್ಭವಿಸಿತು’ ಎಂದು ಹೇಳಿದರು. ‘ಸಣ್ಣದಾದ ತಾಂತ್ರಿಕ ಸಮಸ್ಯೆ ಎದುರಾಯಿತು ಚಳಿಗಾಲದ ಋತುವಿನ ಆರಂಭಕ್ಕೆ ಸಂಬಂಧಿಸಿ ವಿಮಾನಗಳ ಹಾರಾಟದ ವೇಳಾಪಟ್ಟಿಯಲ್ಲಿ ಬದಲಾವಣೆಯಲ್ಲಿನ ಸಮಸ್ಯೆ ಪ್ರತಿಕೂಲ ಹವಾಮಾನದ ಸಮಸ್ಯೆ ವಿಮಾನಗಳ ಹಾರಾಟ ದಟ್ಟಣೆ ಸಮಸ್ಯೆ ಸಿಬ್ಬಂದಿ ಕೆಲಸದ ವೇಳಾಪಟ್ಟಿ ಬಗೆಗಿನ ಹೊಸ ನಿಯಮಗಳ ಜಾರಿಯಲ್ಲಿನ ಸಮಸ್ಯೆಯಿಂದಾಗಿ ಬಿಕ್ಕಟ್ಟು ಉದ್ಭವಿಸಿತು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.