ಅಹಮದಾಬಾದ್: ‘ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತ- ಜಪಾನ್ ಸಹಭಾಗಿತ್ವ ಮತ್ತು ಮೈತ್ರಿಯು ಜಾಗತಿಕ ಸ್ಥಿರತೆ ಮತ್ತು ಸಮೃದ್ಧಿಗೆ ಹೆಚ್ಚು ಪ್ರಸ್ತುತವಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ತಿಳಿಸಿದರು.
ಅಹಮದಾಬಾದ್ ಮ್ಯಾನೇಜ್ಮೆಂಟ್ ಅಸೋಸಿಯೇಷನ್ನಲ್ಲಿ (ಎಎಂಎ) ನಿರ್ಮಿಸಲಾದ ಜಪಾನ್ನ ಜೆನ್ ಗಾರ್ಡನ್ ಮತ್ತು ಕೈಜೆನ್ ಅಕಾಡೆಮಿಯನ್ನು ಅವರು ವರ್ಚುವಲ್ ವೇದಿಕೆ ಮೂಲಕ ಉದ್ಘಾಟಿಸಿದರು.
ಈ ಬಳಿಕ ಮಾತನಾಡಿದ ಅವರು, ‘ಜೆನ್ ಗಾಡರ್ನ್ ಮತ್ತು ಕೈಜೆನ್ ಅಕಾಡೆಮಿಯ ಉದ್ಘಾಟನೆಯು ಜಪಾನ್ ಮತ್ತು ಭಾರತದ ನಡುವಿನ ಸಂಬಂಧವನ್ನು ಇನ್ನಷ್ಟು ಸದೃಢಗೊಳಿಸಲಿದೆ. ಜಪಾನ್ ಪ್ರಧಾನಮಂತ್ರಿ ಯೋಶಿಹಿದೆ ಸುಗಾ ಅವರು ದಿಟ್ಟ ವ್ಯಕ್ತಿ. ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತ-ಜಪಾನ್ ಪಾಲುದಾರಿಕೆಯು ಜಾಗತಿಕ ಸ್ಥಿರತೆ ಮತ್ತು ಸಮೃದ್ಧಿಗೆ ಇನ್ನಷ್ಟು ಅಗತ್ಯವಾಗಿದೆ’ ಎಂದರು.
‘ನಾವು ಪ್ರಸ್ತುತ ಹಲವಾರು ಜಾಗತಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಉಭಯ ರಾಷ್ಟ್ರಗಳ ನಡುವಿನ ಸ್ನೇಹ ಸಂಬಂಧ ದಿನದಿಂದ ದಿನಕ್ಕೆ ಬಲಿಷ್ಠಗೊಳ್ಳಬೇಕು. ಜಪಾನ್ನ ದುಡಿಯುವ ಸಂಸ್ಕೃತಿ ಭಾರತದಲ್ಲಿ ಹಬ್ಬುವಂತೆ ಕೈಜೆನ್ ಅಕಾಡೆಮಿ ಮಾಡಬೇಕು ಮತ್ತು ಉಭಯ ರಾಷ್ಟಗಳ ನಡುವಿನ ವ್ಯವಹಾರವನ್ನು ಹೆಚ್ಚಿಸಬೇಕು’ ಎಂದು ಅವರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.