ಮುಂಬೈ: ದೆಹಲಿ ನಿಜಾಮುದ್ದೀನ್ನಲ್ಲಿ ನಡೆದಿದ್ದ ತಬ್ಲೀಗಿ ಜಮಾತ್ ಸಭೆಯಲ್ಲಿ ಭಾಗವಹಿಸಿದ್ದ ಇಂಡೊನೇಷ್ಯಾದ 10 ಮಂದಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಇವರ 20 ದಿನಗಳ ಕ್ವಾರಂಟೈನ್ ಅವಧಿ ಮುಗಿದಿದ್ದು, ಕೊರೊನಾ ತಗುಲಿಲ್ಲ ಎಂಬುದು ಖಚಿತಗೊಂಡಿದೆ.
ತಬ್ಲೀಗಿ ಜಮಾತ್ ಸಭೆಯಲ್ಲಿ ಭಾಗವಹಿಸಿದ್ದ ಇಂಡೊನೇಷ್ಯಾದ ಒಟ್ಟು 12 ಜನ ಏಪ್ರಿಲ್ 1ರಂದು ಪತ್ತೆಯಾಗಿದ್ದರು. ಈ ಪೈಕಿ ಇಬ್ಬರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಬಾಂದ್ರಾದ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಉಳಿದ 10 ಮಂದಿಯನ್ನು ಕ್ವಾರಂಟೈನ್ಗೆ ಒಳಪಡಿಸಲಾಗಿತ್ತು ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.
ಆಸ್ಪತ್ರೆಗೆ ದಾಖಲಾಗಿರುವ ಇಬ್ಬರೂ ಈಗ ಗುಣಮುಖರಾಗಿದ್ದಾರೆ. ಅವರನ್ನು ಮೇ 8ರ ವರೆಗೆ ಕ್ವಾರಂಟೈನ್ನಲ್ಲಿ ಇರಿಸಲಾಗುತ್ತದೆ ಎಂದೂ ಪೊಲೀಸರು ಹೇಳಿದ್ದಾರೆ.
ಬಂಧಿತರ ವಿರುದ್ಧ ‘ಜೀವಕ್ಕೆ ಅಪಾಯಕಾರಿಯಾದ ಸೋಂಕು ಹರಡುವಿಕೆಯಲ್ಲಿ ನಿರ್ಲಕ್ಷ್ಯ’ ಮತ್ತು ಇತರ ಕೆಲವು ಕಾಯ್ದೆಗಳ ಅನ್ವಯ ಪ್ರಕರಣ ದಾಖಲಿಸಲಾಗಿದೆ.
ತಬ್ಲೀಗಿ ಜಮಾತ್ ಸಭೆಯಲ್ಲಿ ಭಾಗವಹಿಸಿದ್ದ ಇವರು ಮಾರ್ಚ್ 7ರಂದು ಬಾಂದ್ರಾದ ಅಪಾರ್ಟ್ಮೆಂಟ್ಗೆ ಬಂದು ನೆಲೆಸಿದ್ದರು. ಇಂಡೊನೇಷ್ಯಾದ 12 ಮಂದಿ ಪ್ರಜೆಗಳು ಫೆಬ್ರುವರಿ 29ರಂದು ಭಾರತಕ್ಕೆ ಬಂದಿರುವುದು ಮತ್ತು ತಬ್ಲೀಗಿ ಜಮಾತ್ ಸಭೆಯಲ್ಲಿ ಭಾಗವಹಿಸಿರುವುದು ವಿಚಾರಣೆ ಸಂದರ್ಭದಲ್ಲಿ ಪೊಲೀಸರಿಗೆ ತಿಳಿದುಬಂದಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.