ಮುಂಬೈ: ‘ವಿಚ್ಛೇದನ ಪಡೆದ ಪತಿ ಪುರುಷೋತ್ತಮ್ ಚವ್ಹಾಣ್ ಅವರಿಂದ ಐಪಿಎಸ್ ಅಧಿಕಾರಿ ರಶ್ಮಿ ಕರಂಡಿಕರ್ ₹2.64 ಕೋಟಿ ಹಣ ಪಡೆದಿದ್ದು, ಈ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಚವ್ಹಾಣ್ ವಿರುದ್ಧ ವಂಚನೆ ಸೇರಿದಂತೆ ಹಲವು ಪ್ರಕರಣ ದಾಖಲಾಗಿವೆ’ ಎಂದು ಮುಂಬೈ ಪೊಲೀಸ್ ಇಲಾಖೆಯ ಆರ್ಥಿಕ ಅಪರಾಧಗಳ ವಿಭಾಗವು (ಇಒಡಬ್ಲ್ಯು) ಮಾಹಿತಿ ನೀಡಿದೆ.
‘ಪುರುಷೋತ್ತಮ್ ಚವ್ಹಾಣ್ ಹಾಗೂ ರಶ್ಮಿ ನಡುವೆ ಅನುಮಾನಾಸ್ಪದ ವಹಿವಾಟುಗಳು ನಡೆದಿವೆ’ ಎಂದು ಇಒಡಬ್ಲ್ಯು ಹೇಳಿದೆ.
ಇದರ ಬೆನ್ನಲ್ಲೇ, ರಶ್ಮಿ ಕರಂಡಿಕರ್ ಅವರು 2017–18ರಲ್ಲಿ ಸಲ್ಲಿಸಿದ್ದ ಆದಾಯ ತೆರಿಗೆ ಮಾಹಿತಿಯ ವಿವರ ನೀಡುವಂತೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಕಚೇರಿಗೆ ಇಒಡಬ್ಲ್ಯೂ ಪತ್ರ ಬರೆದಿದೆ.
ರಶ್ಮಿ ಅವರು, ಸಿವಿಲ್ ಡಿಫೆನ್ಸ್, ಹೋಮ್ ಗಾರ್ಡ್ ವಿಭಾಗದಲ್ಲಿ ಎಸ್ಪಿಯಾಗಿ ಕೆಲಸ ಮಾಡುತ್ತಿದ್ದು, ಅವರ ಬ್ಯಾಂಕ್ ಖಾತೆಯನ್ನು ಪತಿಯೇ ನಿರ್ವಹಿಸುತ್ತಿದ್ದರು ಎಂದು ತನಿಖೆ ವೇಳೆ ಕಂಡುಬಂದಿತ್ತು ಎಂದು ಇಒಡಬ್ಲ್ಯೂ ತಿಳಿಸಿತ್ತು.
ಸರ್ಕಾರದ ನಿವೇಶನಗಳನ್ನು ಕಡಿಮೆ ಮೊತ್ತಕ್ಕೆ ಕೊಡಿಸುವುದಾಗಿ ನಂಬಿಸಿ ₹32 ಕೋಟಿ ವಂಚಿಸಿದ ಆರೋಪದ ಮೇಲೆ ಪುರುಷೋತ್ತಮ್ ಚವ್ಹಾಣ್ ಅವರನ್ನು ಈಗಾಗಲೇ ಬಂಧಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.