
ನವದೆಹಲಿ: ಭಾರತೀಯ ರೈಲ್ವೆ ಹಾಗೂ ಕ್ಯಾಟರಿಂಗ್ ಪ್ರವಾಸೋದ್ಯಮ ನಿಗಮದ (ಐಆರ್ಸಿಟಿಸಿ) ಹಗರಣದಲ್ಲಿ ಆರ್ಜೆಡಿ ವರಿಷ್ಠ ಲಾಲೂ ಪ್ರಸಾದ್ ಮತ್ತು ಅವರ ಪತ್ನಿ ರಾಬ್ಡಿ ದೇವಿ, ಲಾಲೂ ಪುತ್ರ, ಬಿಹಾರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ ವಿರುದ್ಧ ಇಲ್ಲಿನ ನ್ಯಾಯಾಲಯವು ದೋಷಾರೋಪ ನಿಗದಿಪಡಿಸಿದೆ. ಬಿಹಾರ ವಿಧಾನಸಭೆ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆಯೂ ಆರ್ಜೆಡಿಗೆ ತೀವ್ರ ಹಿನ್ನಡೆ ಎಂದು ವಿಶ್ಲೇಷಿಸಲಾಗಿದೆ.
ಐಆರ್ಸಿಟಿಸಿಗೆ ಸೇರಿದ 2 ಹೋಟೆಲ್ಗಳನ್ನು ಖಾಸಗಿ ಸಂಸ್ಥೆ ಯೊಂದಿಗೆ ಕಾರ್ಯಾಚರಣಾ ಒಪ್ಪಂದ ಮಾಡಿಕೊಳ್ಳುವ ಮೂಲಕ ಅವ್ಯವಹಾರವೆಸಗಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದು, ರಾಬ್ಡಿ ದೇವಿ ಹಾಗೂ ತೇಜಸ್ವಿ ಯಾದವ್ ವಿರುದ್ಧ ಕ್ರಿಮಿನಲ್ ಸಂಚು ಹಾಗೂ ವಂಚನೆ ಆರೋಪ ಹೊರಿಸಲಾಗಿದೆ ಎಂದು ರೌಸ್ ಅವೆನ್ಯೂ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ವಿಶಾಲ್ ಗೊಗ್ನೆ ತಿಳಿಸಿದರು.
ಲಾಲೂ ಪ್ರಸಾದ್ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿಯಲ್ಲಿ ಆರೋಪ ಹೊರಿಸಲಾಗಿದೆ. ಮೂವರ ವಿರುದ್ಧ ಆರೋಪಪಟ್ಟಿ ಹೊರಿಸಲಿರುವ ಕಾರಣ ಅಕ್ಟೋಬರ್ 13ರಂದು ಖುದ್ದು ಹಾಜರಿರಬೇಕು ಎಂದು ಸೆ.24ರಂದು ನ್ಯಾಯಾಲಯವು ಸೂಚನೆ ನೀಡಿತ್ತು.
ಸಿಬಿಐ ಸಲ್ಲಿಸಿದ ಆರೋಪಪಟ್ಟಿ ಪ್ರಕಾರ, ‘2004ರಿಂದ 2014ರವರೆಗಿನ ಅವಧಿಯಲ್ಲಿ ಒಡಿಶಾದ ಪುರಿ ಹಾಗೂ ಜಾರ್ಖಂಡ್ನ ರಾಂಚಿಯಲ್ಲಿರುವ ಭಾರತೀಯ ರೈಲ್ವೆ ಒಡೆತನದ ಲ್ಲಿದ್ದ ಬಿಎನ್ಆರ್ ಹೋಟೆಲ್ಗಳನ್ನು ಮೊದಲಿಗೆ ಐಆರ್ಸಿಟಿಸಿಗೆ ವರ್ಗಾಯಿಸಲಾಗಿತ್ತು. ನಂತರ ಈ ಹೋಟೆಲ್ಗಳ ಕಾರ್ಯಾಚರಣೆ, ನಿರ್ವಹಣೆಗಾಗಿ ಬಿಹಾರದ ಪಾಟ್ನಾದ ಸುಜಾತಾ ಹೋಟೆಲ್ಸ್ ಪ್ರೈವೆಟ್ ಲಿಮಿಟೆಡ್ಗೆ ಗುತ್ತಿಗೆಗೆ ನೀಡಲಾಗಿತ್ತು. ಸುಜಾತಾ ಸಂಸ್ಥೆಗೆ ಹೋಟೆಲ್ಗಳನ್ನು ಗುತ್ತಿಗೆಗೆ ನೀಡಲು ಅತ್ಯಂತ ವ್ಯವಸ್ಥಿತವಾಗಿ ನಿಯಮಗಳನ್ನು ಉಲ್ಲಂಘಿಸಲಾಗಿತ್ತು’ ಎಂದು ಆರೋಪಿಸಿದೆ.
ಇದಲ್ಲದೇ, ಐಆರ್ಸಿಟಿಸಿ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ವಿ.ಕೆ.ಅಸ್ಥಾನಾ, ಆರ್.ಕೆ.ಗೋಯಲ್, ಸುಜಾತಾ ಹೋಟೆಲ್ಸ್ ಹಾಗೂ ಚಾಣಕ್ಯ ಹೋಟೆಲ್ನ ನಿರ್ದೇಶಕ ಹಾಗೂ ಮಾಲೀಕರಾದ ವಿಜಯ್ ಕೊಚ್ಛಾರ್, ವಿನಯ್ ಕೊಚ್ಛಾರ್ ಅವರ ಹೆಸರನ್ನು ಉಲ್ಲೇಖಿಸಿದೆ.
ಇದಲ್ಲದೇ, ಡಿಲೈಟ್ ಮಾರ್ಕೆಟಿಂಗ್ ಕಂಪನಿ (ಈಗ ಲಾರಾ ಪ್ರಾಜೆಕ್ಟ್ಸ್) ಹಾಗೂ ಸುಜಾತಾ ಹೋಟೆಲ್ಸ್ ಪ್ರೈವೆಟ್ ಲಿಮಿಟೆಡ್ ವಿರುದ್ಧವೂ ದೋಷಾರೋಪ ಪಟ್ಟಿಯಲ್ಲಿ ಆರೋಪ ಹೊರಿಸಲಾಗಿದೆ.
ಕಾಂಗ್ರೆಸ್, ಆರ್ಜೆಡಿ ಶಾಸಕರು ಬಿಜೆಪಿ ಸೇರ್ಪಡೆ
ಪಟ್ನಾ: ‘ಇಂಡಿಯಾ’ ಕೂಟದ ಇಬ್ಬರು ಬಂಡಾಯ ಶಾಸಕರು ಸೋಮವಾರ ಬಿಜೆಪಿ ಸೇರ್ಪಡೆಯಾದರು.
ಮೊಹಾನಿಯಾ ಕ್ಷೇತ್ರದ ಆರ್ಜೆಡಿ ಶಾಸಕಿ ಸಂಗೀತಾ ಕುಮಾರಿ ಹಾಗೂ ಬಿಕ್ರಾಮ್ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಗೆದ್ದಿದ್ದ ಸಿದ್ಧಾರ್ಥ್ ಸೌರವ್ ಅವರನ್ನು ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ದಿಲೀಪ್ ಜೈಸ್ವಾಲ್ ಪಕ್ಷಕ್ಕೆ ಬರ ಮಾಡಿಕೊಂಡರು.
‘ಇಂಡಿಯಾ ಕೂಟದ ಅರ್ಧ ಡಜನ್ಗೂ ಅಧಿಕ ಶಾಸಕರು ಅಲ್ಲಿಂದ ಜಿಗಿದು, ಎನ್ಡಿಎ ಒಕ್ಕೂಟಕ್ಕೆ ಸೇರಲಿದ್ದಾರೆ ಎಂದು ನಾನು ಇತ್ತೀಚಿಗೆ ಹೇಳಿದ್ದೆನು. ಇದು ಮೊದಲ ಕಂತು’ ಎಂದು ದಿಲೀಪ್ ಜೈಸ್ವಾಲ್ ತಿಳಿಸಿದ್ದಾರೆ. ಇಬ್ಬರನ್ನು ಪಕ್ಷದಿಂದ ಅನರ್ಹಗೊಳಿಸುವಂತೆ ಕೋರಿ ಸ್ಪೀಕರ್ ನಂದ್ ಕಿಶೋರ್ ಯಾದವ್ ಅವರಿಗೆ ಎರಡು ಪಕ್ಷಗಳು ಸಲ್ಲಿಸಿದ ಅರ್ಜಿಯೂ ಇನ್ನಷ್ಟೇ ಇತ್ಯರ್ಥವಾಗಬೇಕಿದೆ.
ಹೊರಗಿನವರಿಗೆ ಭಯಪಡಲ್ಲ: ತೇಜಸ್ವಿ ಕಿಡಿ
ಪಟ್ನಾ: ತಮ್ಮ ವಿರುದ್ಧ ನ್ಯಾಯಾಲಯವು ದೋಷಾರೋಪ ನಿಗದಿಪಡಿಸಿದ ಬೆನ್ನಲ್ಲೇ, ಬಿಜೆಪಿ ವಿರುದ್ಧ ತೇಜಸ್ವಿ ಯಾದವ್ ಕಿಡಿಕಾರಿದ್ದಾರೆ.
‘ನೈಜ ಬಿಹಾರಿ ವ್ಯಕ್ತಿಯು ಎಂದಿಗೂ ಹೊರಗಿನವರಿಗೆ ಭಯಪಡುವುದಿಲ್ಲ, ಜೀವ ಇರುವವರೆಗೂ ಬಿಜೆಪಿ ವಿರುದ್ಧ ಹೋರಾಟ ನಡೆಸುತ್ತೇನೆ’ ಎಂದಿದ್ದಾರೆ.
‘ನಮ್ಮನ್ನು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುವುದಿಲ್ಲ ಎಂದು ತಿಂಗಳ ಹಿಂದೆ ಬಿಹಾರಕ್ಕೆ ಭೇಟಿ ನೀಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬೆದರಿಕೆ ಒಡ್ಡಿದ್ದರು. ನಾನು ಹೋರಾಟ ನಡೆಸಲಿದ್ದು, ಅದರಲ್ಲಿ ಜಯಶಾಲಿಯಾಗಲಿದ್ದೇನೆ. ನಾವು ಬಿಹಾರಿಗಳು. ನೈಜ ಬಿಹಾರಿಗಳಾಗಿದ್ದೇವೆ. ನಾವು ಹೊರಗಿನವರಿಗೆ ಬೆದರಲ್ಲ, ಜೈ ಬಿಹಾರ್, ಜೈ ಬಿಹಾರಿ’ ಎಂದು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಕಾಂಗ್ರೆಸ್ ಆರ್ಜೆಡಿ ನಾಯಕರು ಬಿಜೆಪಿ ಸೇರ್ಪಡೆ
ಪಾಟ್ನಾ: ‘ಇಂಡಿಯಾ’ ಕೂಟದ ಇಬ್ಬರು ಬಂಡಾಯ ಶಾಸಕರು ಸೋಮವಾರ ಬಿಜೆಪಿ ಸೇರ್ಪಡೆಯಾದರು. ಮೊಹಾನಿಯಾ ಕ್ಷೇತ್ರದ ಆರ್ಜೆಡಿ ಶಾಸಕಿ ಸಂಗೀತಾ ಕುಮಾರಿ ಹಾಗೂ ಬಿಕ್ರಾಮ್ ಕ್ಷೇತ್ರದಿಂದ ಕಾಂಗ್ರೆಸ್ನಿಂದ ಗೆದ್ದಿದ್ದ ಸಿದ್ಧಾರ್ಥ್ ಸೌರವ್ ಅವರನ್ನು ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ದಿಲೀಪ್ ಜೈಸ್ವಾಲ್ ಪಕ್ಷಕ್ಕೆ ಬರ ಮಾಡಿಕೊಂಡರು.
‘ಇಂಡಿಯಾ ಕೂಟದ ಅರ್ಧ ಡಜನ್ಗೂ ಅಧಿಕ ಶಾಸಕರು ಅಲ್ಲಿಂದ ಜಿಗಿದು ಎನ್ಡಿಎ ಒಕ್ಕೂಟಕ್ಕೆ ಸೇರಲಿದ್ದಾರೆ ಎಂದು ನಾನು ಇತ್ತೀಚಿಗೆ ಹೇಳಿದ್ದೆನು. ಇದು ಮೊದಲ ಕಂತು’ ಎಂದು ದಿಲೀಪ್ ಜೈಸ್ವಾಲ್ ತಿಳಿಸಿದ್ದಾರೆ.
ಇಬ್ಬರನ್ನು ಪಕ್ಷದಿಂದ ಅನರ್ಹಗೊಳಿಸುವಂತೆ ಕೋರಿ ಸ್ಪೀಕರ್ ನಂದ್ ಕಿಶೋರ್ ಯಾದವ್ ಅವರಿಗೆ ಎರಡು ಪಕ್ಷಗಳು ಸಲ್ಲಿಸಿದ ಅರ್ಜಿಯೂ ಇನ್ನಷ್ಟೇ ಇತ್ಯರ್ಥವಾಗಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.