
ರಾಕೆಟ್.
ಶ್ರೀಹರಿಕೋಟ: ಭೂ ಸರ್ವೇಕ್ಷಣಾ ಉಪಗ್ರಹ ಮತ್ತು ಇತರ 14 ಉಪಗ್ರಹಗಳನ್ನು ಹೊತ್ತ ಪಿಎಸ್ಎಲ್ವಿ–ಸಿ62 ರಾಕೆಟ್ ಉಡಾವಣೆಗೆ ಕ್ಷಣಗಣನೆ ಆರಂಭವಾಗಿದೆ.
ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಸೋಮವಾರ ಬೆಳಿಗ್ಗೆ 10.18ಕ್ಕೆ 250 ಟನ್ ತೂಕದ ಸಾಧನಗಳನ್ನು ಹೊತ್ತು ಎಲ್ಎಸ್ಎಲ್ವಿ–ಸಿ62 ರಾಕೆಟ್ ನಭಕ್ಕೆ ಚಿಮ್ಮಲಿದೆ ಎಂದು ಇಸ್ರೊ ಭಾನುವಾರ ತಿಳಿಸಿದೆ.
ಇಸ್ರೊ ಅಂಗಸಂಸ್ಥೆಯಾದ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ ನೇತೃತ್ವದಲ್ಲಿ ದೇಶೀಯ ಹಾಗೂ ವಿದೇಶದ 14 ಉಪಗ್ರಹಗಳನ್ನು ಕಕ್ಷೆಗೆ ಕಳುಹಿಸಲು ಸಿದ್ಧತೆ ನಡೆದಿದೆ.
ಥಾಯ್ಲೆಂಡ್ ಮತ್ತು ಬ್ರಿಟನ್ ಅಭಿವೃದ್ಧಿ ಪಡಿಸಿದ ಭೂ ಸರ್ವೇಕ್ಷಣಾ ಉಪಗ್ರಹವನ್ನು ಪಿಎಸ್ಎಲ್ವಿ ರಾಕೆಟ್ ಮೊದಲಿಗೆ ಕಕ್ಷೆಗೆ ತಲುಪಿಸಲಿದೆ. ನಂತರ ನಭಕ್ಕೆ ಹಾರಿದ 17 ನಿಮಿಷಗಳ ಒಳಗಾಗಿ ಉಳಿದ 13 ಉಪಗ್ರಹಗಳನ್ನು ಸೂರ್ಯ ಸಮನ್ವಯ ಕಕ್ಷೆಗೆ ಸೇರಿಸಲಿದೆ.
ಉಪಗ್ರಹಕ್ಕೆ ಇಂಧನ ಮರುಪೂರಣ; ತಂತ್ರಜ್ಞಾನ ಅನಾವರಣಕ್ಕೆ ಸಿದ್ಧತೆ
ನವದೆಹಲಿ (ಪಿಟಿಐ): ಭೂ ಕಕ್ಷೆಯಲ್ಲಿರುವ ಉಪಗ್ರಹಕ್ಕೆ ಇಂಧನ ಮರು ಪೂರೈಕೆಗೆ ಅನುವು ಮಾಡಿಕೊಡುವ ಮತ್ತು ಉಪಗ್ರಹದ ಜೀವಿತಾವಧಿಯನ್ನು ಹೆಚ್ಚಿಸುವ ತಂತ್ರಜ್ಞಾನವನ್ನು ಅನಾವರಣ ಮಾಡಲು ಚೆನ್ನೈ ಮೂಲದ ಬಾಹ್ಯಾಕಾಶ ನವೋದ್ಯಮ ಸಂಸ್ಥೆ ‘ಆರ್ಬಿಟ್ಏಡ್ ಏರೊಸ್ಪೇಸ್’ ಸಿದ್ಧವಾಗಿದೆ.
ಬಾಹ್ಯಾಕಾಶದಲ್ಲಿ ಅವಶೇಷಗಳ ವಿಲೇವಾರಿ ಸಮಸ್ಯೆಗೂ ಇದು ಪರಿಹಾರ ಒದಗಿಸಲು ಚಿಂತನೆ ನಡೆಸಿದೆ. ಸೋಮವಾರ ಪಿಎಸ್ಎಲ್ವಿ ಉಡಾವಣಾ ವಾಹಕದೊಂದಿಗೆ ‘ಆಯುಲ್ಸ್ಯಾಟ್’ ಎಂಬ ಟ್ಯಾಂಕರ್ ಉಪಗ್ರಹವನ್ನು ‘ಆರ್ಬಿಟ್ಏಡ್’ ನಭಕ್ಕೆ ಕಳುಹಿಸಲಿದೆ.
ಇದು ‘ಸ್ಟಾಂಡರ್ಡ್ ಇಂಟರ್ಫೇಸ್ ಫಾರ್ ಡಾಕಿಂಗ್ ಆ್ಯಂಡ್ ರಿಫ್ಯುಯೆಲ್’ ಪೋರ್ಟ್ (ಎಸ್ಐಡಿಆರ್ಪಿ) ಬಳಸಿ ಆಂತರಿಕವಾಗಿ ಇಂಧನ ದತ್ತಾಂಶ ವರ್ಗಾವಣೆ ಮಾಡಲಿದೆ. ‘ಮೊದಲಿಗೆ ಉಪಗ್ರಹದೊಳಗೆ ಒಂದು ಟ್ಯಾಂಕರ್ನಿಂದ ಇನ್ನೊಂದು ಟ್ಯಾಂಕರ್ಗೆ ಇಂಧನವನ್ನು ವರ್ಗಾಯಿಸುತ್ತೇವೆ’ ಎಂದು ಆರ್ಬಿಟ್ಏಡ್ ಸಂಸ್ಥಾಪಕ ಸಿಇಒ ಸಕ್ತಿಕುಮಾರ್ ರಾಮಚಂದ್ರನ್ ತಿಳಿಸಿದರು. ‘ಶೀಘ್ರವೇ ಕಕ್ಷೆಯಲ್ಲಿ ಇಂಧನ ಕೇಂದ್ರವನ್ನು ಆರಂಭಿಸುತ್ತೇವೆ. ಈ ಮೂಲಕ ಉಪಗ್ರಹಗಳ ಜೀವಿತಾವಧಿಯನ್ನು ಹೆಚ್ಚಿಸಲು ಯತ್ನಿಸುತ್ತೇವೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.