ನವದೆಹಲಿ: ಇಂಡೊ ಟಿಬೆಟನ್ ಪೊಲೀಸ್ (ಐಟಿಬಿಪಿ) ಭದ್ರತಾ ಪಡೆಯವರು ದೆಹಲಿಯ ರಾಧಾ ಸೊವಾಮಿ ಬೀಸ್ ಆವರಣದಲ್ಲಿ ಆಮ್ಲಜನಕ ನೆರವಿನ 500 ಹಾಸಿಗೆಗಳ ಸಾಮರ್ಥ್ಯವಿರುವ ಕೋವಿಡ್ ಆರೈಕೆ ಕೇಂದ್ರವನ್ನು ಆರಂಭಿಸಿದ್ದಾರೆ.
ಸೋಮವಾರದಿಂದ ಆರಂಭವಾಗಿರುವ ಈ ಕೇಂದ್ರದಲ್ಲಿ 25 ಕೊರೊನಾ ರೋಗಿಗಳು ದಾಖಲಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಕ್ಷಿಣ ದೆಹಲಿಯ ಛತ್ತರ್ಪುರ ಪ್ರದೇಶದ ರಾಧಾ ಸೋಮಿ ಬಿಯಾಸ್ ಆವರಣದಲ್ಲಿ ಆರಂಭವಾಗಿರುವ ಈ ಹೊಸ ಕೇಂದ್ರಕ್ಕೆ ಸರ್ದಾರ್ ವಲ್ಲಭ ಭಾಯ್ ಪಟೇಲ್ ಕೋವಿಡ್ ಆರೈಕೆ ಕೇಂದ್ರ(ಎಸ್ಪಿಸಿಸಿಸಿ) ಎಂದು ಹೆಸರಿಸಲಾಗಿದೆ. ದೆಹಲಿಯಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಈ ಕೇಂದ್ರವನ್ನು ಆರಂಭಿಸಲಾಗಿದೆ.
ಕೇಂದ್ರ ಗೃಹಸಚಿವಾಲಯದ ಅಧೀನದ ಗಡಿಭದ್ರತಾ ಪಡೆ ಐಟಿಬಿಪಿಯ ಉಸ್ತುವಾರಿಯಲ್ಲಿರುವ ಈ ಕೇಂದ್ರವನ್ನು ಎಲ್ಲ ರೋಗಿಗಳಿಗೂ ಮುಕ್ತವಾಗಿಸಿಲ್ಲ. ಬದಲಿಗೆ, ದೆಹಲಿಯ ಸರ್ವೈಲೆನ್ಸ್ ಅಧಿಕಾರಿಗಳು ಅನುಮೋದಿಸಿದ ರೋಗಿಗಳಿಗೆ ಮಾತ್ರ ಈ ಕೇಂದ್ರಕ್ಕೆ ಪ್ರವೇಶ ನೀಡಲಾಗುತ್ತದೆ. ಈ ಕೇಂದ್ರದಲ್ಲಿ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು ಎಂದು ಐಟಿಬಿಪಿ ಹೇಳಿದೆ.
‘ಸೋಮವಾರದಿಂದ ಈ ಎಸ್ಪಿಸಿಸಿಸಿ ಕೇಂದ್ರ ಕಾರ್ಯಾರಂಭ ಮಾಡಿದೆ‘ ಎಂದು ಐಟಿಬಿಪಿ ವಕ್ತಾರ ವಿವೇಕ್ ಕುಮಾರ್ ಪಾಂಡೆ ತಿಳಿಸಿದರು.
ಇದಕ್ಕೂ ಮುನ್ನ ಎಸ್ಪಿಸಿಸಿಸಿ ಕೇಂದ್ರಕ್ಕೆ ಭೇಟಿ ನೀಡಿದ ದೆಹಲಿ ಮುಖ್ಯಮಂತ್ರಿದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು, ಇಂಥ ವೈದ್ಯಕೀಯ ಕೇಂದ್ರಕ್ಕೆ ವೈದ್ಯರು ಮತ್ತು ಸಿಬ್ಬಂದಿಯನ್ನು ನೀಡಿದ ಕೇಂದ್ರ ಸರ್ಕಾರಕ್ಕೆ ಧನ್ಯವಾದ ಹೇಳಿದರು. ಇದೇ ವೇಳೆ ‘ಈ ಎಸ್ಪಿಸಿಸಿಸಿ ಕೇಂದ್ರಕ್ಕೆ 200 ಐಸಿಯು ಹಾಸಿಗೆಗಳ ವ್ಯವಸ್ಥೆಯನ್ನೂ ಮಾಡಲಾಗುವುದು‘ ಎಂದುಭರವಸೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.