ಜಮ್ಮು:ಭಾರಿ ಶಸ್ತ್ರಾಸ್ತ್ರಗಳೊಂದಿಗೆ ದೇಶದೊಳಗೆ ನುಸುಳಿದ್ದ ಪಾಕಿಸ್ತಾನದ ಇಬ್ಬರು ದಾಳಿಕೋರರನ್ನು ಭಾರತೀಯ ಸೇನೆ ಹತ್ಯೆ ಮಾಡಿದೆ. ಈ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಭಾರತದ ಮೂವರು ಯೋಧರು ಸಾವನ್ನಪ್ಪಿದ್ದಾರೆ.
‘ರಜೌರಿ ಜಿಲ್ಲೆಯ ಸುಂದರ್ಬನಿ ವಲಯದ ಗಡಿ ನಿಯಂತ್ರಣ ರೇಖೆ ಬಳಿ ಭಾನುವಾರ ಮಧ್ಯಾಹ್ನ 1.45ರ ಸಮಯದಲ್ಲಿ ದೇಶದೊಳಗೆ ನುಗ್ಗಲು ಯತ್ನಿಸಿದ ಪಾಕಿಸ್ತಾನಿಯರನ್ನು ಗುಂಡಿಟ್ಟು ಕೊಲ್ಲಲಾಗಿದೆ’ ಎಂದು ರಕ್ಷಣಾ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.
ಈ ನುಸುಳುಕೋರರು, ಪಾಕಿಸ್ತಾನ ಸೇನೆಯ ಯೋಧರನ್ನು ಹಾಗೂ ತರಬೇತಿಯುಳ್ಳ ಉಗ್ರರನ್ನು ಹೊಂದಿರುವ ಗಡಿ ಕ್ರಿಯಾ ತಂಡದ (ಬಿಎಟಿ) ಸದಸ್ಯರಾಗಿದ್ದು, ಮುಜಾಹಿತ್ ಫೋರ್ಸ್ ರೆಜಿಮೆಂಟ್ಗೆ ಸೇರಿದವರಾಗಿರಬಹುದು ಎಂದು ಶಂಕಿಸಲಾಗಿದೆ ಎಂದು ಸೇನೆಯ ಅಧಿಕಾರಿಗಳು ಹೇಳಿದ್ದಾರೆ.
ನುಸುಳುಕೋರರ ಬಳಿ ಇದ್ದ ಎರಡು ಎ.ಕೆ–47 ರೈಫಲ್ ಸೇರಿದಂತೆ ಭಾರೀ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕಾರ್ಯಾಚರಣೆಯಲ್ಲಿ ಗಾಯಗೊಂಡಿರುವ ಯೋಧರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯವಿಲ್ಲ ಎಂದು ಸೇನೆ ಹೇಳಿದೆ.
ಪಾಕಿಸ್ತಾನದಿಂದ 250 ಉಗ್ರರು ದೇಶದೊಳಗೆ ಬರಲು ಹೊಂಚು ಹಾಕುತ್ತಿದ್ದಾರೆ ಎಂದು ಶ್ರೀನಗರದ 15ನೇ ಕಾರ್ಪ್ಸ್ ಲೆಫ್ಟಿನೆಂಟ್ ಜನರಲ್ ಎ.ಕೆ. ಭಟ್ ಇತ್ತೀಚೆಗೆ ಹೇಳಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.