ಪೀಯೂಷ್ ಗೋಯಲ್
–ಪಿಟಿಐ ಚಿತ್ರ
ನವದೆಹಲಿ: ಸಣ್ಣ ಪುಟ್ಟ ತಪ್ಪುಗಳಿಗೆ ಶಿಕ್ಷೆಯಿಂದ ವಿನಾಯಿತಿ ನೀಡುವ, ಸುಗಮ ಜೀವನ ನಿರ್ವಹಣೆ ಹಾಗೂ ಸುಲಲಿತ ವ್ಯವಹಾರಕ್ಕೆ ಅನುವು ಮಾಡಿಕೊಡುವ ಉದ್ದೇಶದಿಂದ ‘ಜನ ವಿಶ್ವಾಸ್ (ತಿದ್ದುಪಡಿ)–2025’ ಮಸೂದೆಯನ್ನು ಸೋಮವಾರ ಲೋಕಸಭೆಯಲ್ಲಿ ಮಂಡಿಸಲಾಗಿದೆ.
ವಾಣಿಜ್ಯ ಹಾಗೂ ಕೈಗಾರಿಕಾ ಸಚಿವ ಪೀಯೂಷ್ ಗೋಯಲ್ ಅವರು ಮಸೂದೆಯನ್ನು ಮಂಡಿಸಿದರು. ವ್ಯಾಪಾರ ನಡೆಸುವವರಲ್ಲಿ ವಿಶ್ವಾಸ ಮೂಡಿಸುವ ಗುರಿಯನ್ನು ಈ ಮಸೂದೆ ಹೊಂದಿದೆ. ಇದನ್ನು ಪರಿಶೀಲನಾ ಸಮಿತಿಗೆ ವರ್ಗಾಯಿಸಲಾಗಿದೆ. ಸಂಸತ್ನ ಮುಂದಿನ ಅಧಿವೇಶನದ ಮೊದಲ ದಿನದಂದು ಈ ಸಮಿತಿಯು ಈ ಸಂಬಂಧ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಿದೆ.
ಬಿಹಾರದಲ್ಲಿ ಮತದಾರರ ವಿಶೇಷ ಸಮಗ್ರ ಪಟ್ಟಿ ಪರಿಷ್ಕರಣೆ ಹಾಗೂ ಇತರೆ ವಿಚಾರಗಳಿಗೆ ಸಂಬಂಧಿಸಿದಂತೆ ಚರ್ಚೆಗೆ ಕೋರಿ ವಿರೋಧ ಪಕ್ಷಗಳು ಪ್ರತಿಭಟನೆ ನಡೆಸಿದ ಹೊರತಾಗಿಯೂ ಮಸೂದೆಯನ್ನು ಮಂಡಿಸಲಾಯಿತು.
ಈ ಮಸೂದೆಯ ಮೂಲಕ 335 ನಿಬಂಧನೆಗಳನ್ನು ತಿದ್ದುಪಡಿ ಮಾಡುವ ಪ್ರಸ್ತಾವವಿದೆ. ವ್ಯವಹಾರಗಳ ಸರಳೀಕರಣಗೊಳಿಸಲು 288 ನಿಬಂಧನೆಗಳನ್ನು ಅಪರಾಧ ಮುಕ್ತಗೊಳಿಸಲಾಗುತ್ತಿದ್ದು, 67 ನಿಬಂಧನೆಗಳು ಸುಗಮ ಜೀವನಕ್ಕೆ ಸಂಬಂಧಿಸಿರಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.