ADVERTISEMENT

ಆಂಧ್ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದೆ ಜನ ಸೇನಾ: ತೆಲುಗು ನಟ ಪವನ್ ಕಲ್ಯಾಣ್‌

ಪಿಟಿಐ
Published 15 ಜೂನ್ 2023, 3:08 IST
Last Updated 15 ಜೂನ್ 2023, 3:08 IST
ನಟ ಪವನ್ ಕಲ್ಯಾಣ್
ನಟ ಪವನ್ ಕಲ್ಯಾಣ್   

ಕತಿಪುಡಿ( ಆಂಧ್ರ ಪ್ರದೇಶ): ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ‘ಜನ ಸೇನಾ‘ ಪಕ್ಷವು ಸ್ಪರ್ಧಿಸಲಿದೆ ಎಂದು ಜನ ಸೇನಾ ಸಂಸ್ಥಾಪಕ ಹಾಗೂ ತೆಲುಗು ನಟ ಪವನ್ ಕಲ್ಯಾಣ್‌ ಘೋಷಿಸಿದ್ದಾರೆ.

ಪೂರ್ವ ಗೋದಾವರಿ ಜಿಲ್ಲೆಯ ಕತಿಪುಡಿ ಗ್ರಾಮದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ‘ಜನ ಸೇನಾ‘ ಪಕ್ಷವು ವಿಧಾನಸಭೆಯನ್ನು ಪ್ರವೇಶಿಸಲಿದ್ದು, ಹೆಜ್ಜೆ ಗುರುತುಗಳನ್ನು ಮೂಡಿಸಲಿದೆ. ಸಾಧ್ಯವಾದಷ್ಟು ಜನರ ಪರವಾಗಿ ನಿಲುತ್ತೇವೆ ಎಂದು ಪವನ್‌ ಕಲ್ಯಾಣ್ ಹೇಳಿದ್ದಾರೆ.

ವಿಶೇಷವಾಗಿ ವಿನ್ಯಾಸಗೊಳಿಸಿದ ವಾಹನದ ಮೂಲಕ ಚುನಾವಣಾ ಯಾತ್ರೆ ‘ವಾರಾಹಿ‘ಯನ್ನು ಆರಂಭಿಸಲಾಗಿದೆ.

ADVERTISEMENT

ಅಣ್ಣಾವರಂನಿಂದ ಆರಂಭವಾಗಿರುವ ಜನಸೇನಾ ಯಾತ್ರೆಯು ಪಶ್ಚಿಮ ಗೋದಾವರಿ ಜಿಲ್ಲೆಯ ಭೀಮಾವರಂನಲ್ಲಿ ಅಂತ್ಯಗೊಳ್ಳಲಿದೆ.

2019ರ ವಿಧಾನಸಭಾ ಚುನಾವಣೆಯಲ್ಲಿ ಪವನ್‌ ಕಲ್ಯಾಣ್ ಸೋತ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಭೀಮಾವರಂ ಕೂಡ ಒಂದಾಗಿದೆ. ಆದರೆ ಷಡ್ಯಂತ್ರದಿಂದ ಚುನಾವಣೆಯಲ್ಲಿ ಸೋತಿದ್ದೇನೆ ಎಂದು ಕಲ್ಯಾಣ್ ಆರೋಪಿಸಿದ್ದಾರೆ.

ಮುಖ್ಯಮಂತ್ರಿ ವೈ. ಎಸ್ ಜಗನ್ ಮೋಹನ್ ರೆಡ್ಡಿ ಸರಿಯಾದ ರೀತಿಯಲ್ಲಿ ಆಡಳಿತ ನಡೆಸಲಿ, ಇಲ್ಲದಿದ್ದರೆ ಮುಂದೊಂದು ದಿನ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥರನ್ನು ನೆಲದ ಮೇಲೆ ಕೂರುವಂತೆ ಮಾಡುವುದಾಗಿ ಕಲ್ಯಾಣ್ ಹೇಳಿದ್ದಾರೆ.

2019ರ ಚುನಾವಣೆಯಲ್ಲಿ ರಾಪಾಕ ವರಪ್ರಸಾದ್ ಎಂಬುವವರ ಮೂಲಕ ‘ಜನ ಸೇನಾ‘ ಕೇವಲ ಒಂದು ವಿಧಾನಸಭಾ ಸ್ಥಾನವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.