ಪಟ್ನಾ: ಉಪ ಚುನಾವಣೆಗಳಲ್ಲಿ ಎನ್ಡಿಎ ಮಿತ್ರಪಕ್ಷಗಳಿಗೆ ಸೋಲಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಜನರೇ ಮಾಲೀಕರು ಎಂದು ಹೇಳಿದ್ದಾರೆ.
ಬಿಹಾರದ ಬೊಚಹಾಂ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಪ್ರತಿಪಕ್ಷ ಆರ್ಜೆಡಿ ಅಭ್ಯರ್ಥಿ ಅಮರ್ ಕುಮಾರ್ ಪಾಸ್ವಾನ್ ಅವರು ಬಿಜೆಪಿಯ ಬೇಬಿ ಕುಮಾರಿ ಅವರನ್ನು 36,653 ಮತಗಳ ಅಂತರದಲ್ಲಿ ಸೋಲಿಸಿದ್ದರು.
ಈ ಫಲಿತಾಂಶದಿಂದ ಆಡಳಿತಾರೂಢ ಸಮ್ಮಿಶ್ರ ಸರ್ಕಾರವು ಮುಜುಗರಕ್ಕೀಡಾಗಿದೆ. ನಿಷಾದ್ ನಾಯಕ ಮುಕೇಶ್ ಸಹಾನಿ ಅವರನ್ನು ಸಂಪುಟದಿಂದ ವಜಾಗೊಳಿಸಿರುವುದು, ಚಿರಾಗ್ ಪಾಸ್ವಾನ್ ಬಂಡಾಯ ಹಾಗೂ ಇತರ ಕಾರಣಗಳು ಬಿಜೆಪಿ ಸೋಲಿಗೆ ಕಾರಣ ಎಂದು ವಿಶ್ಲೇಷಿಸಲಾಗಿತ್ತು.
ನಾಲ್ಕು ರಾಜ್ಯಗಳ ನಾಲ್ಕು ವಿಧಾನಸಭೆ ಕ್ಷೇತ್ರ ಮತ್ತು ಲೋಕಸಭೆಯ ಒಂದು ಕ್ಷೇತ್ರದ ಉಪಚುನಾವಣೆ ಫಲಿತಾಂಶವು ಶನಿವಾರ ಪ್ರಕಟಗೊಂಡಿತ್ತು. ಎಲ್ಲ ಐದು ಕ್ಷೇತ್ರಗಳಲ್ಲಿಯೂ ಎನ್ಡಿಎಯೇತರ ಪಕ್ಷಗಳು ಗೆದ್ದಿದ್ದವು. ಕಾಂಗ್ರೆಸ್ ಮತ್ತು ಆರ್ಜೆಡಿ, ಪ್ರತಿಸ್ಪರ್ಧಿಗಳಿಂದ ತಲಾ ಒಂದೊಂದು ವಿಧಾನಸಭಾ ಕ್ಷೇತ್ರಗಳನ್ನು ಕಸಿದುಕೊಂಡಿದ್ದವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.