ADVERTISEMENT

ಜಾರ್ಖಂಡ್| ಮತ ಎಣಿಕೆ ಆರಂಭ, ಸ್ಥಿರ ಸರ್ಕಾರಕ್ಕೆ ಸಿಗುವುದೇ ಅವಕಾಶ?

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2019, 2:38 IST
Last Updated 23 ಡಿಸೆಂಬರ್ 2019, 2:38 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ರಾಂಚಿ: 81 ಸದಸ್ಯಬಲದ ಜಾರ್ಖಂಡ್ ವಿಧಾನಸಭೆಯ ಮತ ಎಣಿಕೆ ಆರಂಭವಾಗಿದ್ದು, ಮತದಾರ ಸ್ಥಿರ ಸರ್ಕಾರಕ್ಕೆ ಮಣೆ ಹಾಕಿದ್ದಾನೆಯೇ ಎಂಬ ಕುತೂಹಲಕ್ಕೆ ಮಧ್ಯಾಹ್ನದ ವೇಳೆಗೆ ಸ್ಪಷ್ಟ ಉತ್ತರ ದೊರೆಯಲಿದೆ.

2000ನೇ ಇಸ್ವಿಯಲ್ಲಿ ಬಿಹಾರದಿಂದ ಒಡೆದು, ರೂಪುಗೊಂಡ ಜಾರ್ಖಂಡ್ ರಾಜ್ಯವು ಈವರೆಗೆ 10 ಮುಖ್ಯಮಂತ್ರಿ ಗಳನ್ನು ಕಂಡಿದೆ. 19 ವರ್ಷಗಳ ಅವಧಿಯಲ್ಲಿ ಮೂರು ಬಾರಿ ರಾಷ್ಟ್ರಪತಿ ಆಡಳಿತವನ್ನೂ ಜಾರಿ ಮಾಡಲಾಗಿದೆ. ಹೊಸದಾಗಿ ಹುಟ್ಟಿಕೊಂಡ ಯಾವ ರಾಜ್ಯದಲ್ಲೂ ಈ ಪ್ರಮಾಣದ ರಾಜಕೀಯ ವಿಪ್ಲವ ದಾಖಲಾದ ಉದಾಹರಣೆಯಿಲ್ಲ.

2014ರ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಈ ರಾಜ್ಯದಲ್ಲಿ ಮಾತ್ರ ಪೂರ್ಣ ಬಹುಮತದೊಂದಿಗೆ ಆಡಳಿತ ನಡೆಸಿತು. ಬಿಜೆಪಿ 37 ಕ್ಷೇತ್ರಗಳಲ್ಲಿ, ಮಿತ್ರಪಕ್ಷ ಎಜೆಎಸ್‌ಯು (ಆಲ್ ಜಾರ್ಖಂಡ್ ಸ್ಟೂಡೆಂಟ್ಸ್ ಯೂನಿಯನ್) 6 ಕ್ಷೇತ್ರಗಳಲ್ಲಿ ಜಯಗಳಿಸಿ ಬಹುಮತ ಖಚಿತಪಡಿಸಿಕೊಂಡವು. ಈ ಮಧ್ಯೆ ಸರ್ಕಾರ ತನ್ನ ಸ್ಥಾನವನ್ನು ಇನ್ನಷ್ಟು ಗಟ್ಟಿಮಾಡಿಕೊಂಡಿತು. ಬಾಬುಲಾಲ್‌ ಮರಾಂಡಿ ನೇತೃತ್ವದ ಜಾರ್ಖಂಡ್ ವಿಕಾಸ್ ಮೋರ್ಚಾದ (ಜೆವಿಎಂ) ಎಂಟು ಶಾಸಕರ ಪೈಕಿ ಆರು ಶಾಸಕರು ಸರ್ಕಾರದ ಬೆಂಬಲಕ್ಕೆ ನಿಂತರು.

ಈ ಬಾರಿಯ ಚುನಾವಣೆಯಲ್ಲಿ ಹಾಲಿ ಮುಖ್ಯಮಂತ್ರಿ ರಘುವರ ದಾಸ್ ಅವರು ಸ್ವಂತ ಬಲದ ಸರ್ಕಾರ ರಚಿಸುವುದು ಕಷ್ಟ ಎಂಬುದಾಗಿ ಮತಗಟ್ಟೆ ಸಮೀಕ್ಷೆಗಳು ಹೇಳಿವೆ. ಜೆಎಂಎಂ, ಕಾಂಗ್ರೆಸ್ ಹಾಗೂ ಆರ್‌ಜೆಡಿ ಸೇರಿ ರಚಿಸಿಕೊಂಡಿರುವ ‘ಮಹಾ ಘಟಬಂಧನ್’ ಈ ಬಾರಿ ಬಹುಮತ ಗಳಿಸುವ ಸಾಧ್ಯತೆಯಿದೆ ಎಂದು ಸಮೀಕ್ಷೆಗಳು ಭವಿಷ್ಯ ನುಡಿದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.