ಬೆಂಗಳೂರು: ಕರ್ನಾಟಕ- ಮಹಾರಾಷ್ಟ್ರ ರಾಜ್ಯಗಳ ಗಡಿ ವಿವಾದ ತೀವ್ರಗೊಂಡಿದ್ದು, ಸರ್ಕಾರವು ರಣಹೇಡಿಯಂತೆ ಬಾಲ ಮುದುರಿಕೊಂಡಿದೆ. ವಿರೋಧ ಪಕ್ಷವು ಈ ವಿಷಯಕ್ಕೂ ತನಗೂ ಸಂಬಂಧವೇ ಇಲ್ಲದಂತೆ ಇದೆ. ಕರ್ನಾಟಕಕ್ಕೆ ಕನ್ನಡ-ಕೇಂದ್ರಿತ ಸರ್ಕಾರದ ಅನಿವಾರ್ಯತೆ ಎಷ್ಟಿದೆ ಎನ್ನುವುದಕ್ಕೆ ಇದು ಸಾಕ್ಷಿ ಎಂದು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಹೇಳಿದ್ದಾರೆ.
ಕರ್ನಾಟಕದಲ್ಲಿರುವ ಮರಾಠಿ ಭಾಷಿಕ ಹಳ್ಳಿಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳಲು ಅಲ್ಲಿನ ವಿಧಾನಸಭೆಯಲ್ಲಿ ಇತ್ತೀಚೆಗೆ ನಿರ್ಣಯ ಅಂಗೀಕರಿಸಲಾಗಿದೆ. ಇನ್ನೊಂದೆಡೆ, ವಿವಾದಿತ ಪ್ರದೇಶಗಳನ್ನು ಕೇಂದ್ರಾಡಳಿತ ಪ್ರದೇಶವಾಗಿಸಲು ಕಾನೂನು ಹೋರಾಟ ನಡೆಸಬೇಕಾಗಿ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಆಗ್ರಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ದೇವೇಗೌಡರು ಎರಡೂ ರಾಷ್ಟ್ರೀಯ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
‘ಕರ್ಣಾಟ ಬಲಂ ಅಜೇಯಂʼ ಎಂದು ಕೊಂಡಾಡುವಷ್ಟು ಬಲಿಷ್ಠವಾಗಿದ್ದ ನಮ್ಮ ರಾಜ್ಯವು ಇಂದು ಛಿದ್ರ ಛಿದ್ರವಾಗುವ ಭಯದ ವಾತಾವರಣ ನಿರ್ಮಾಣವಾಗಿರುವುದಕ್ಕೆ ರಾಷ್ಟ್ರೀಯ ಪಕ್ಷಗಳ ನಿರ್ಲಕ್ಷ್ಯಕರ ಆಡಳಿತ ಕಾರಣವೇ ಹೊರತು ಮತ್ತೀನ್ನೇನು ಅಲ್ಲ‘ ಎಂದಿದ್ದಾರೆ.
‘ಕರ್ನಾಟಕದ ಗತವೈಭವ ಮರುಕಳಿಸಬೇಕಿದ್ದರೇ ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮನಾಗಬೇಕಿದೆ. ಇದು ಪ್ರಾದೇಶಿಕ ಪಕ್ಷ ಅಧಿಕಾರಕ್ಕೆ ಬರುವುದರಿಂದ ಮಾತ್ರ ಸಾಧ್ಯ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.