
ಪಟ್ನಾ: ಬಿಹಾರ ಚುನಾವಣೆಗೂ ಮುನ್ನ ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಮಾಜಿ ಸಚಿವ ಶೈಲೇಶ್ ಕುಮಾರ್ ಸೇರಿ 11 ನಾಯಕರನ್ನು ಜೆಡಿಯು ಪಕ್ಷದಿಂದ ಉಚ್ಛಾಟಿಸಿದೆ.
‘ಉಚ್ಛಾಟಿತ 11 ಸದಸ್ಯರು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದಾರೆಂದು ಕಂಡುಬಂದ ತಕ್ಷಣವೇ ಪಕ್ಷವು ಶಿಸ್ತು ಕ್ರಮ ಕೈಗೊಂಡಿದೆ’ ಎಂದು ಶನಿವಾರ ಸಂಜೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಜೆಡಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದನ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಉಚ್ಛಾಟಿತ ಸದಸ್ಯರಲ್ಲಿ ಮಾಜಿ ಶಾಸಕರಾದ ಶ್ಯಾಮ್ ಬಹದ್ದೂರ್ ಸಿಂಗ್ ಮತ್ತು ಸುದರ್ಶನ್ ಕುಮಾರ್, ಮಾಜಿ ಎಂಎಲ್ಸಿಗಳಾದ ಸಂಜಯ್ ಪ್ರಸಾದ್ ಮತ್ತು ರಣವಿಜಯ್ ಸಿಂಗ್ ಅವರು ಸೇರಿದ್ದಾರೆ.
‘ಚುನಾವಣೆಗೆ ಪಕ್ಷವು ಘೋಷಿಸಿರುವ ಅಧಿಕೃತ ಅಭ್ಯರ್ಥಿಗಳು ಮತ್ತು ಎನ್ಡಿಎ ಮೈತ್ರಿಕೂಟದ ಇತರ ಅಭ್ಯರ್ಥಿಗಳ ವಿರುದ್ಧ ಇವರು(ಉಚ್ಛಾಟಿತರು) ಕೆಲಸ ಮಾಡುತ್ತಿದ್ದರು. ಆ ಮೂಲಕ ಪಕ್ಷದ ಸಿದ್ದಾಂತವನ್ನು ಧಿಕ್ಕರಿಸಿದ್ದಾರೆ’ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.
243 ಸದಸ್ಯ ಬಲದ ಬಿಹಾರ ವಿಧಾನಸಭೆಗೆ ನವೆಂಬರ್ 6 ಮತ್ತು ನವೆಂಬರ್ 11 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ನವೆಂಬರ್ 14 ರಂದು ಮತ ಎಣಿಕೆ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.