ಪಟ್ನಾ: ‘ಆರ್.ಸಿ.ಪಿ. ಸಿಂಗ್ ರಾಜೀನಾಮೆ ನೀಡಿದ ನಂತರ ಯಾವುದೇ ಪ್ರಾತಿನಿಧ್ಯವಿಲ್ಲದೆ ಉಳಿದಿರುವ ಕೇಂದ್ರ ಸಚಿವ ಸಂಪುಟವನ್ನು ಸೇರುವುದಿಲ್ಲ’ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ನೇತೃತ್ವದ ಜೆಡಿ(ಯು) ಪಕ್ಷವು ಭಾನುವಾರ ಸ್ಪಷ್ಟಪಡಿಸಿದೆ.
ಭಾನುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೆಡಿ(ಯು) ರಾಷ್ಟ್ರೀಯ ಅಧ್ಯಕ್ಷ ರಾಜೀವ್ ರಂಜನ್ ಸಿಂಗ್ (ಲಾಲನ್), ‘ಆರ್.ಸಿ.ಪಿ. ಸಿಂಗ್ ಅವರ ದೇಹವು ಇಲ್ಲಿತ್ತು. ಆದರೆ ಅವರ ಆತ್ಮವು ಬೇರೆಲ್ಲೋ ಇತ್ತು. ಆದ್ದರಿಂದ ಅವರು ಪಕ್ಷದಿಂದ ನಿರ್ಗಮಿಸುವುದು ನಿರೀಕ್ಷಿತವಾಗಿತ್ತು’ ಎಂದು ಹೇಳಿದರು.
‘2019ರ ಲೋಕಸಭಾ ಚುನಾವಣೆಯ ಬಳಿಕ ಕೇಂದ್ರ ಸರ್ಕಾರವನ್ನು ಸೇರದಿರಲು ನಿರ್ಧರಿಸಿದ್ದೆವು. ನಾವು ನಮ್ಮ ನಿಲುವಿಗೇ ಅಂಟಿಕೊಳ್ಳುತ್ತೇವೆ’ ಎಂದು ರಾಜೀವ್ ರಂಜನ್ ಹೇಳಿದರು.
ನೀತಿ ಆಯೋಗದ ಸಭೆಗೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಗೈರಾಗಿರುವುದರಿಂದ ಬಿಜೆಪಿ ಜತೆಗಿನ ಸಂಬಂಧ ಹಳಸಿದೆ ಎಂಬ ವದಂತಿಗಳನ್ನು ಅಲ್ಲಗಳೆದ ಅವರು, ಜೆಡಿಯು ಮತ್ತು ಬಿಜೆಪಿ ನಡುವೆ ‘ಎಲ್ಲವೂ ಚೆನ್ನಾಗಿದೆ’ ಎಂದು ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.