ಸಾಂದರ್ಭಿಕ ಚಿತ್ರ
–ಎ.ಐ ಚಿತ್ರ
ಧನ್ಬಾದ್: ಜಗಳವಾಡಿದ ಪಾನಮತ್ತ ಗಂಡನನ್ನು ಕೊಲೆ ಮಾಡಿ ಪತ್ನಿಯೊಬ್ಬಳು ಮನೆಯೊಳಗೆ ಹೂತುಹಾಕಿದ ಘಟನೆ ಜಾರ್ಖಂಡ್ನ ಧನ್ಬಾದ್ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ಶನಿವಾರ ಹೇಳಿದ್ದಾರೆ.
ತುಂಡಿ ಪೊಲೀಸ್ ಠಾಣಾ ವ್ಯಾಪ್ತಿಯ ತಿಲಯಾಟನ್ ಗ್ರಾಮದಲ್ಲಿ ಪ್ರಕಟಣೆ ಘಟಿಸಿದೆ.
ಮೃತದೇಹವನ್ನು ಹೂತುಹಾಕಿ 10 ದಿನ ಕಳೆದಿದ್ದು, ಇಂದು (ಶನಿವಾರ) ಅದನ್ನು ಹೊರತೆಗೆದು ಶಹೀದ್ ನಿರ್ಮಲ್ ಮಹತೊ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಸುರ್ಜಿ ಮಜಿಯಾನ್ (42) ಎಂಬುವವರು ತನ್ನ ಪತಿ ಸುರೇಶ್ ಹನ್ಸದಾ (45) ಎಂಬವರನ್ನು ಕೊಲೆ ಮಾಡಿ, ಹುಲ್ಲಿನ ಮಾಡು ಇರುವ ಮನೆಯ ಕೋಣೆಯೊಳಗೆ ಗುಂಡಿ ತೋಡಿ ಹೂತು ಹಾಕಿದ್ದಾರೆ.
10 ದಿನಗಳ ಹಿಂದೆ ಮೃತಪಟ್ಟ ಚಿಕ್ಕಪ್ಪನ ಅಂತ್ಯ ಸಂಸ್ಕಾರಕ್ಕೆ ಸುರೇಶ್ ಗೈರಾಗಿದ್ದರಿಂದ ಕುಟುಂಬಸ್ಥರಿಗೆ ಸಂಶಯ ಉಂಟಾಗಿತ್ತು. ಮನೆಯಿಂದ ದುರ್ವಾಸನೆ ಬರುತ್ತಿರುವುದು ನೆರೆಮನೆಯವರ ಗಮನಕ್ಕೆ ಬಂದಿದೆ. ಕುಟುಂಬಸ್ಥರು ಶುಕ್ರವಾರ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಗಂಡನ ಗೈರು ಹಾಜರಿಗೆ ನಾನಾ ರೀತಿಯ ಉತ್ತರ ನೀಡಿದ್ದಾರೆ. ಕಠಿಣ ವಿಚಾರಣೆ ಮಾಡಿದಾಗ, ಅಳುತ್ತಲೇ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.
‘ಗಂಡ ಬಹುತೇಕ ಪ್ರತಿದಿನವೂ ಕುಡಿದು ಬಂದು ಜಗಳವಾಡುತ್ತಿದ್ದ. ಹಲವು ಮಹಿಳೆಯರ ಸಹವಾಸವು ಇತ್ತು. ಇದರಿಂದ ಬೇಸತ್ತು ಕೃತ್ಯ ಎಸಗಿದ್ದಾಗಿ ಆಕೆ ಒಪ್ಪಿಕೊಂಡಿದ್ದಾಳೆ. ಲಾಠಿ ಮತ್ತು ಕಡುಗೋಲಿನಿಂದ ಹೊಡೆದು ಕೊಲೆ ಮಾಡಿದ್ದಾಗಿ ಆಕೆ ತಿಳಿಸಿದ್ದಾಳೆ. ಅದನ್ನು ವಶಪಡಿಸಿಕೊಳ್ಳುವ ಪ್ರಯತ್ನದಲ್ಲಿದ್ದೇವೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.