ADVERTISEMENT

ಪತ್ನಿಯ ಕೊಲೆ ಮಾಡಿ ಶವ ಕತ್ತರಿಸಿದ ಪ್ರಕರಣ: ಲೋಕಸಭೆಯಲ್ಲಿ ಗುಡುಗಿದ ಬಿಜೆಪಿ ಸಂಸದ

ಪಿಟಿಐ
Published 19 ಡಿಸೆಂಬರ್ 2022, 9:35 IST
Last Updated 19 ಡಿಸೆಂಬರ್ 2022, 9:35 IST
   

ನವದೆಹಲಿ: ಬುಡಕಟ್ಟು ಸಮುದಾಯಕ್ಕೆ ಸೇರಿದ 22 ವರ್ಷದ ಮಹಿಳೆಯನ್ನು ಆಕೆಯ ಪತಿಯೇ ಕೊಲೆ ಮಾಡಿ ಶವವನ್ನು 50 ತುಂಡುಗಳಾಗಿ ಕತ್ತರಿಸಿದ ಪ್ರಕರಣ ಜಾರ್ಖಂಡ್‌ನಲ್ಲಿ ವರದಿಯಾಗಿತ್ತು. ಲೋಕಸಭೆಯಲ್ಲಿ ಈ ವಿಚಾರವನ್ನು ಸೋಮವಾರ ಪ್ರಸ್ತಾಪಿಸಿರುವ ಬಿಜೆಪಿ ಸಂಸದ ನಿಶಿಕಾಂತ್‌ ದುಬೇ ಅವರು, ಜಾರ್ಖಂಡ್‌ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಪತ್ನಿಯನ್ನು ಕೊಲೆ ಮಾಡಿದ ಬಳಿಕ ಶವವನ್ನು ಕತ್ತರಿಸಿದ್ದ 28 ವರ್ಷದ ಆರೋಪಿ ದಿಲ್ದಾರ್ ಅನ್ಸಾರಿ, ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಬಿಸಾಡಿದ್ದ. ಸಾಹೀಬ್‌ಗಂಜ್‌ಜಿಲ್ಲೆಯ ಬೋರಿಯಾ ಪ್ರದೇಶದಲ್ಲಿ ದೇಹದ ಭಾಗಗಳನ್ನು ನಾಯಿಗಳು ಎಳೆದಾಡುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಆರೋಪಿ ಅನ್ಸಾರಿ ಹಾಗೂ ಆತನ ಕುಟುಂಬದವರನ್ನು ಭಾನುವಾರ ಬಂಧಿಸಲಾಗಿದೆ.

ಈ ಕುರಿತು ಲೋಕಸಭೆಯಲ್ಲಿ ಮಾತನಾಡಿರುವ ಜಾರ್ಖಂಡ್‌ನ ಗೊಡ್ಡ ಜಿಲ್ಲೆಯ ಸಂಸದ ದುಬೆ ಅವರು, ಕೊಲೆಗಾರರಿಗೆ ಸರ್ಕಾರದ ಬೆಂಬಲವಿದೆ ಎಂದು ಕಿಡಿಕಾರಿದ್ದಾರೆ. 'ಬಾಂಗ್ಲಾದ ನುಸುಳುಕೋರರು ನನ್ನ ಕ್ಷೇತ್ರವನ್ನು ವಶಪಡಿಸಿಕೊಂಡಿದ್ದಾರೆ ಎಂದು ಪದೇ ಪದೇ ಹೇಳುತ್ತಿದ್ದೇನೆ. ಇಂತಹ ಕೃತ್ಯಗಳು ಜಾರ್ಖಂಡ್‌ ಸರ್ಕಾರದ ಬೆಂಬಲದಿಂದಲೇ ನಡೆಯುತ್ತಿವೆ' ಎಂದು ಆರೋಪಿಸಿದ್ದಾರೆ.

ADVERTISEMENT

'ಆದಿವಾಸಿ ಬುಡಕಟ್ಟು ಸಮುದಾಯಕ್ಕೆ ಸೇರಿದ ಬಾಲಕಿಯನ್ನು ಮೊನ್ನೆ (ಶನಿವಾರ) ಬಲವಂತವಾಗಿ ಮದುವೆಯಾಗಿ, ನಂತರ ಆಕೆಯನ್ನು ಹತ್ಯೆ ಮಾಡಿ ದೇಹವನ್ನು 50 ತುಂಡುಗಳನ್ನಾಗಿ ಕತ್ತರಿಸಲಾಗಿದೆ. ಆದಾಗ್ಯೂ ಯಾವುದೇ ಕ್ರಮವನ್ನು ಕೈಗೊಂಡಿಲ್ಲ. ಈ ಕೊಲೆಯು ದೆಹಲಿ, ಕೋಲ್ಕತ್ತ ಅಥವಾ ಮುಂಬೈನಲ್ಲಿ ನಡೆದಿದ್ದರೆ, ಮಾಧ್ಯಮಗಳು ಈ ಬಗ್ಗೆ ಧ್ವನಿ ಎತ್ತುತ್ತಿದ್ದವು' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆರೋಪಿ ದಿಲ್ದಾರ್ ಅನ್ಸಾರಿ ಹಾಗೂ ಆತನ ಕುಟುಂಬದವರು ದ್ವೇಷದ ಕಾರಣಕ್ಕೆ ಈ ಕೃತ್ಯವೆಸಗಿದ್ದಾರೆ. ಅಂದಹಾಗೆ, ಮೃತ ಮಹಿಳೆಯು ಪಹಾರಿಯ ಆದಿವಾಸಿ ಸಮುದಾಯಕ್ಕೆ ಸೇರಿದವರಾಗಿದ್ದು, ಆರೋಪಿಯ ಎರಡನೇ ಹೆಂಡತಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.