ADVERTISEMENT

ದೇಶದ್ರೋಹ ಪ್ರಕರಣ: ಕನ್ಹಯ್ಯಗೆ ಚಾರ್ಜ್‌‌ಶೀಟ್ ಪ್ರತಿ ನೀಡಲು ಸೂಚನೆ

ಪಿಟಿಐ
Published 15 ಮಾರ್ಚ್ 2021, 8:55 IST
Last Updated 15 ಮಾರ್ಚ್ 2021, 8:55 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: 2016ರ ದೇಶದ್ರೋಹ ಪ್ರಕರಣದ ಆರೋಪಿಗಳಾದ ಜೆಎನ್‌ಯು ವಿದ್ಯಾರ್ಥಿ ಸಂಘದಮಾಜಿ ಅಧ್ಯಕ್ಷ ಕನ್ಹಯ್ಯ ಕುಮಾರ್ ಮತ್ತು ಇತರ ಒಂಬತ್ತು ಮಂದಿಗೆ ದೋಷಾರೋಪ ಪಟ್ಟಿಯ ಪ್ರತಿಯನ್ನು ನೀಡುವಂತೆ ನ್ಯಾಯಾಲಯವು ಸೋಮವಾರ ದೆಹಲಿ ಪೊಲೀಸರಿಗೆ ನಿರ್ದೇಶನ ನೀಡಿದೆ.

ಈ ಬಗ್ಗೆ ವಿಚಾರಣೆ ನಡೆಸಿದ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ (ಸಿಎಂಎಂ) ಪಂಕಜ್ ಶರ್ಮಾ ಅವರು, ಪ್ರಕರಣದ ದಾಖಲೆಗಳನ್ನು ಏಪ್ರಿಲ್‌ 7 ರಂದು ಪರಿಶೀಲನೆ ಮಾಡುವುದಾಗಿ ಹೇಳಿದರು. ಇದೇ ವೇಳೆ ಬಂಧನಕ್ಕೊಳಗಾಗದ ಏಳು ಆರೋಪಿಗಳಿಗೆ ಜಾಮೀನು ಕೂಡ ನೀಡಿದರು.

ಕನ್ಹಯ್ಯ ಕುಮಾರ್, ಜೆಎನ್‌ಯು ಮಾಜಿ ವಿದ್ಯಾರ್ಥಿಗಳಾದ ಉಮರ್ ಖಾಲಿದ್ ಮತ್ತು ಅನಿರ್ಬನ್ ಭಟ್ಟಾಚಾರ್ಯ ಸೇರಿದಂತೆ ಇತರರ ವಿರುದ್ಧ ಭಾರತ ವಿರೋಧಿ ಘೋಷಣೆಗಳನ್ನು ಕೂಗಿದ್ದರು ಎಂಬ ಆರೋಪ ಇದೆ.

ADVERTISEMENT

ಕಾಶ್ಮೀರಿ ವಿದ್ಯಾರ್ಥಿಗಳಾದ ಅಕ್ವಿಬ್ ಹುಸೇನ್, ಮುಜೀಬ್ ಹುಸೇನ್, ಮುನೀಬ್ ಹುಸೇನ್, ಉಮರ್ ಗುಲ್, ರಾಯಿಯಾ ರಸ್ಸೋಲ್, ಬಶೀರ್ ಭಟ್ ಮತ್ತು ಬಶರತ್ ಈ ಪ್ರಕರಣದ ಇತರ ಏಳು ಆರೋಪಿಗಳು. ಅವರಲ್ಲಿ ಕೆಲವರು ಜೆಎನ್‌ಯು, ಅಲೀಗಡ ಮುಸ್ಲಿಂ ವಿಶ್ವವಿದ್ಯಾಲಯ ಮತ್ತು ಜಾಮಿಯಾ ಮಿಲಿಯಾ ಇಸ್ಲಾಮಿಯಾದಲ್ಲಿ ಓದುತ್ತಿದ್ದರು.

ಇವರ ವಿರುದ್ದ ಐಪಿಸಿ ಸೆಕ್ಷನ್‌ಗಳಾದ 124 ಎ (ದೇಶದ್ರೋಹ), 323 (ಸ್ವಯಂ ಪ್ರೇರಣೆಯಿಂದ ನೋವುಂಟು ಮಾಡುವುದು), 471 (ನಕಲಿ ದಾಖಲೆ ಬಳಕೆ), 143, 149 (ಕಾನೂನುಬಾಹಿರವಾಗಿ ಸಭೆ ಸೇರುವುದು), ‌147 (ಗಲಭೆಗೆ ಶಿಕ್ಷೆ) ಮತ್ತು 120 ಬಿ (ಕ್ರಿಮಿನಲ್ ಪಿತೂರಿ) ಅಡಿಯಲ್ಲಿ ಆರೋಪಗಳನ್ನು ಹೊರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.