ADVERTISEMENT

ದೇಶದ್ರೋಹ ಪ್ರಕರಣ: ಕನ್ಹಯ್ಯ, ಇತರ 9 ಮಂದಿಗೆ ಸಮನ್ಸ್‌

ಪಿಟಿಐ
Published 16 ಫೆಬ್ರುವರಿ 2021, 7:17 IST
Last Updated 16 ಫೆಬ್ರುವರಿ 2021, 7:17 IST
ಕನ್ಹಯ್ಯ ಕುಮಾರ್ 
ಕನ್ಹಯ್ಯ ಕುಮಾರ್    

ನವದೆಹಲಿ: ಇಲ್ಲಿನಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ (ಜೆಎನ್‌ಯುಎಸ್‌ಯು) ಮಾಜಿ ಅಧ್ಯಕ್ಷ ಕನ್ಹಯ್ಯ ಕುಮಾರ್ ಮತ್ತು ಇತರ ಒಂಬತ್ತು ಜನರ ವಿರುದ್ಧ 2016ರ ದೇಶದ್ರೋಹ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರ್ಚ್‌ 15ಕ್ಕೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಿ ಸಮನ್ಸ್‌ ಕಳುಹಿಸಲಾಗಿದೆ.

ದೆಹಲಿ ಪೊಲೀಸರು ಸಲ್ಲಿಸಿದ್ದ ಆರೋಪ ಪಟ್ಟಿಯನ್ನು ಆಧರಿಸಿ ನ್ಯಾಯಾಲಯ ಮಾರ್ಚ್‌ 15ರಂದು ಹಾಜರಾಗುವಂತೆ ಆರೋಪಿಗಳಿಗೆ ಸಮನ್ಸ್‌ ಜಾರಿಗೊಳಿಸಿದೆ.

ದೆಹಲಿಯ ಮುಖ್ಯ ಮೆಟ್ರೊಪಾಲಿಟನ್‌ ನ್ಯಾಯಾಧೀಶ (ಸಿಎಂಎಂ) ಪಂಕಜ್ ಶರ್ಮಾ ಅವರು ಸಮನ್ಸ್‌ ಈ ಜಾರಿ ಮಾಡಿದ್ದಾರೆ. ದೆಹಲಿ ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವರ್ಷದ ಹಿಂದೆ ಅಂತಿಮ ಆರೋಪಪಟ್ಟಿಯನ್ನು ಸಲ್ಲಿಸಿದ್ದರು.

ADVERTISEMENT

ಕನ್ಹಯ್ಯ ಕುಮಾರ್, ಜೆಎನ್‌ಯು ಮಾಜಿ ವಿದ್ಯಾರ್ಥಿಗಳಾದ ಉಮರ್ ಖಾಲಿದ್ ಮತ್ತು ಅನಿರ್ಬನ್ ಭಟ್ಟಾಚಾರ್ಯ ಸೇರಿದಂತೆ ಇತರರ ವಿರುದ್ಧ ಭಾರತ ವಿರೋಧಿ ಘೋಷಣೆಗಳನ್ನು ಕೂಗಿದ್ದರು ಎಂಬ ಆರೋಪ ಇದೆ.

ಕಾಶ್ಮೀರಿ ವಿದ್ಯಾರ್ಥಿಗಳಾದ ಅಕ್ವಿಬ್ ಹುಸೇನ್, ಮುಜೀಬ್ ಹುಸೇನ್, ಮುನೀಬ್ ಹುಸೇನ್, ಉಮರ್ ಗುಲ್, ರಾಯಿಯಾ ರಸ್ಸೋಲ್, ಬಶೀರ್ ಭಟ್ ಮತ್ತು ಬಶರತ್ ಈ ಪ್ರಕರಣದ ಇತರ ಏಳು ಆರೋಪಿಗಳು. ಅವರಲ್ಲಿ ಕೆಲವರು ಜೆಎನ್‌ಯು, ಅಲಿಗಡ ಮುಸ್ಲಿಂ ವಿಶ್ವವಿದ್ಯಾಲಯ ಮತ್ತು ಜಾಮಿಯಾ ಮಿಲಿಯಾ ಇಸ್ಲಾಮಿಯಾದಲ್ಲಿ ಓದುತ್ತಿದ್ದರು.

ಐಪಿಸಿ ಸೆಕ್ಷನ್‌ಗಳಾದ 124 ಎ (ದೇಶದ್ರೋಹ), 323 (ಸ್ವಯಂ ಪ್ರೇರಣೆಯಿಂದ ನೋವುಂಟು ಮಾಡುವುದು), 471 (ನಕಲಿ ದಾಖಲೆ ಬಳಕೆ), 143, 149 (ಕಾನೂನುಬಾಹಿರವಾಗಿ ಸಭೆ ಸೇರುವುದು), ‌147 (ಗಲಭೆಗೆ ಶಿಕ್ಷೆ) ಮತ್ತು 120 ಬಿ (ಕ್ರಿಮಿನಲ್ ಪಿತೂರಿ) ಅಡಿಯಲ್ಲಿ ಆರೋಪಗಳನ್ನು ಹೊರಿಸಲಾಗಿದೆ.

ಬಿಜೆಪಿ ಸಂಸದ ಮಹೇಶ್‌ ಗಿರಿ ಹಾಗೂ ಎಬಿವಿಪಿ ನೀಡಿದ ದೂರುಗಳನ್ನು ಆಧರಿಸಿ ವಸಂತ್ ಕುಂಜ್ (ಉತ್ತರ) ಪೊಲೀಸ್ ಠಾಣೆಯಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ 2016ರ ಫೆಬ್ರುವರಿ 11ರಂದು ಪ್ರಕರಣ ದಾಖಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.