ADVERTISEMENT

ರಾಜಕೀಯ ನಾಯಕರಿಗೆ ಜೂನಿಯರ್ ಎನ್‌ಟಿಆರ್ ಕೈ ಮುಗಿದು ಬೇಡಿಕೊಂಡಿದ್ದೇನು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ನವೆಂಬರ್ 2021, 10:43 IST
Last Updated 21 ನವೆಂಬರ್ 2021, 10:43 IST
ನಟ ಜೂನಿಯರ್ ಎನ್‌ಟಿಆರ್
ನಟ ಜೂನಿಯರ್ ಎನ್‌ಟಿಆರ್   

ಹೈದರಾಬಾದ್: ಆಂಧ್ರಪ್ರದೇಶದಲ್ಲಿ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹಾಗೂ ಆಡಳಿತಾರೂಢ ವೈಎಸ್‌ಆರ್ ಕಾಂಗ್ರೆಸ್ ನಾಯಕರ ನಡುವಿನ ವಾಕ್ಸಮರ ವಿಕೋಪಕ್ಕೆ ಹೋಗಿದೆ. ಎರಡೂ ಬಣದವರು ವೈಯಕ್ತಿಕ ಮಟ್ಟಕ್ಕೆ ಇಳಿದು ಆರೋಪ ಪ್ರತ್ಯಾರೋಪ ಮಾಡುತ್ತಿದ್ದಾರೆ.

ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಟ್ವಿಟರ್‌ನಲ್ಲಿ ವಿಡಿಯೊ ಹಂಚಿಕೊಂಡಿರುವ ನಟ ಜೂನಿಯರ್ ಎನ್‌ಟಿಆರ್, ರಾಜಕೀಯ ನಾಯಕರಿಗೆ ಕೈ ಮುಗಿದು ಬೇಡಿಕೊಂಡಿದ್ದಾರೆ.

‘ದಯವಿಟ್ಟು ರಾಜಕೀಯ ಏನೇ ಇರಲಿ. ವೈಯಕ್ತಿಕ ಮಟ್ಟಕ್ಕೆ ಇಳಿದು ಯಾರೂ ಜಗಳವಾಡಬೇಡಿ. ಈ ದೇಶದ ಜನ ನಿಮ್ಮನ್ನು ನೋಡುತ್ತಿದ್ದಾರೆ. ದಯವಿಟ್ಟು ಮಾದರಿಯಾಗಿರಿ. ನಿಮ್ಮ ನಿಮ್ಮ ಜಗಳದಲ್ಲಿಕುಟುಂಬವನ್ನು ಎಳೆ ತರಬೇಡಿ. ನಾನೊಬ್ಬ ಪ್ರಜೆಯಾಗಿ ನಿಮ್ಮನ್ನು ಕೈ ಮುಗಿದು ಬೇಡಿಕೊಳ್ಳುತ್ತಿದ್ದೇನೆ’ಎಂದು ಪರೋಕ್ಷವಾಗಿ ವೈಎಸ್‌ಆರ್ ಕಾಂಗ್ರೆಸ್ ಹಾಗೂ ಟಿಡಿಪಿ ನಾಯಕರಿಗೆ ಕೇಳಿಕೊಂಡಿದ್ದಾರೆ.

ADVERTISEMENT

ಕಳೆದ ಶುಕ್ರವಾರ ಆಂಧ್ರ ವಿಧಾನಸಭೆಯಲ್ಲಿ ವೈಎಸ್‌ಆರ್ ಕಾಂಗ್ರೆಸ್ಶಾಸಕ ಅಂಬಟ್ಟಿ ರಾಂಬಾಬು ಅವರು, ಚಂದ್ರಬಾಬು ನಾಯ್ಡು ಅವರ ಪತ್ನಿ ನಾರಾ ಭುವನೇಶ್ವರಿ ಅವರ ಬಗ್ಗೆ ಕೀಳು ಮಟ್ಟದಿಂದ ಮಾತನಾಡಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಅಲ್ಲದೇ ಇದೇ ವಿಷಯವಾಗಿ ಹಾಗೂ ವೈಎಸ್‌ಆರ್ ಕಾಂಗ್ರೆಸ್ ನಾಯಕರು ಕಳೆದ ಎರಡು ವರ್ಷದಿಂದ ನನಗೆ ಹಾಗೂ ನನ್ನ ಕುಟುಂಬಕ್ಕೆ ತೀವ್ರ ಅಪಮಾನ ಮಾಡುತ್ತಿದ್ದಾರೆ ಎಂದು ಚಂದ್ರಬಾಬು ನಾಯ್ಡು ಕಣ್ಣೀರು ಹಾಕಿದ್ದರು. ತಾವು ಮುಂದಿನ ಚುನಾವಣೆಯಲ್ಲಿ ಗೆದ್ದು ಸಿಎಂ ಆಗಿಯೇ ವಿಧಾನಸಭೆ ಪ್ರವೇಶ ಮಾಡುತ್ತೇನೆ ಎಂದು ಶಪಥ ಮಾಡಿದ್ದಾರೆ.

ಇನ್ನೊಂದೆಡೆ ವೈಎಸ್‌ಆರ್ ಕಾಂಗ್ರೆಸ್ ಶಾಸಕಿ ಹಾಗೂ ನಟಿ ರೋಜಾ ಕೂಡ ನಾಯ್ಡು ಅವರಿಗೆ ಏಕವಚನದಲ್ಲೇ ತರಾಟೆಗೆ ತೆಗೆದುಕೊಂಡು ನಿಂದಿಸಿದ್ದಾರೆ.ಈ ಹಿನ್ನೆಲೆಯಲ್ಲಿ ಜೂನಿಯರ್ ಎನ್‌ಟಿಆರ್‌ ಅವರ ಈ ವಿಡಿಯೊ ಮಹತ್ವ ಪಡೆದುಕೊಂಡಿದೆ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.