
ಹೈದರಾಬಾದ್: ‘ಪ್ರತಿಯೊಬ್ಬ ಪ್ರಜೆ ಸಾಂವಿಧಾನಿಕ ನೈತಿಕತೆ ಪಾಲಿಸಬೇಕು ಎಂದು ಕಾನೂನು ಬಯಸುತ್ತದೆ. ಸಮಾಜದಲ್ಲಿ ಭ್ರಾತೃತ್ವ ಹಾಗೂ ಸಾಮರಸ್ಯ ನೆಲಸುವಂತೆ ಮಾಡುವುದೇ ಸಂವಿಧಾನದ ಉದ್ದೇಶ’ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಬುಧವಾರ ಹೇಳಿದರು.
‘ಮನೆಗಳಲ್ಲಿ ಅಥವಾ ಸಮುದಾಯದ ಮಟ್ಟದಲ್ಲಿ ಕಂಡುಬರುವ ಒಳ್ಳೆಯ ನಡತೆ ಕೆಲವೊಮ್ಮೆ ಗೌಣ ಎನಿಸಬಹುದು ಇಲ್ಲವೇ ಅದರ ಬಗ್ಗೆ ಭಿನ್ನಾಭಿಪ್ರಾಯ ಮೂಡಬಹುದು. ಎಲ್ಲ ಸಂದರ್ಭಗಳಲ್ಲಿ ಸಾರ್ವತ್ರಿಕ ನೈತಿಕತೆಗಿಂತ ಸಾಂವಿಧಾನಿಕ ನೈತಿಕತೆಯೇ ಪ್ರಮುಖವಾಗಬೇಕು’ ಎಂದು ಅವರು ಪ್ರತಿಪಾದಿಸಿದರು.
ತೆಲಂಗಾಣ ನ್ಯಾಯಮೂರ್ತಿಗಳ ಸಂಘ ಹಾಗೂ ತೆಲಂಗಾಣ ರಾಜ್ಯ ನ್ಯಾಯಾಂಗ ಅಕಾಡೆಮಿ ವತಿಯಿಂದ ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
‘ಕನಿಷ್ಠ ಮಟ್ಟದ ಸಾಂವಿಧಾನಿಕ ನೈತಿಕತೆ ಪಾಲಿಸುವಲ್ಲಿ ನಮ್ಮ ದೇಶ ಇನ್ನೂ ಹಿಂದುಳಿದಿದೆ. ನನ್ನ ಮಗಳ ಸ್ನೇಹಿತೆ ಮುಸ್ಲಿಂ. ಪಿಎಚ್.ಡಿ ಅಧ್ಯಯನಕ್ಕಾಗಿ ದೆಹಲಿಗೆ ಬಂದಿದ್ದಾಗ, ಆಕೆಗೆ ಪಿ.ಜಿಯಲ್ಲಿ ವಸತಿ ನಿರಾಕರಿಸಲಾಯಿತು. ಆಕೆಯ ಧಾರ್ಮಿಕ ಅಸ್ಮಿತೆಯೇ ಇದಕ್ಕೆ ಕಾರಣ’ ಎಂದು ವಿವರಿಸಿದರು.
‘ಮಧ್ಯಾಹ್ನದ ಬಿಸಿಯೂಟವನ್ನು ದಲಿತ ಮಹಿಳೆಯೊಬ್ಬರು ತಯಾರಿಸಿದ ಕಾರಣಕ್ಕೆ ಪಾಲಕರು ಪ್ರತಿಭಟಿಸಿದ ಬಗ್ಗೆ ಮಾಧ್ಯಮಗಳಲ್ಲಿ ವರದಿಗಳನ್ನು ನೋಡಿದೆ. ಇವು ಕೆಲ ಉದಾಹರಣೆಗಳು ಮಾತ್ರ. ನಮ್ಮ ಸಮಾಜದಲ್ಲಿ ಇಂತಹ ದೋಷಗಳು ಎಷ್ಟು ಆಳವಾಗಿ ಬೇರೂರಿವೆ ಹಾಗೂ ಸ್ವಾತಂತ್ರ್ಯ ಸಿಕ್ಕು 75 ವರ್ಷಗಳು ಗತಿಸಿದ ಬಳಿಕವೂ ನಾವು ಕನಿಷ್ಠ ಮಟ್ಟದ ಸಾಂವಿಧಾನಿಕ ನೈತಿಕತೆಯನ್ನು ಮೈಗೂಡಿಸಿಕೊಳ್ಳುವಲ್ಲಿ ವಿಫಲರಾಗಿದ್ದೇವೆ ಎಂಬುದನ್ನು ಇಂತಹ ಘಟನೆಗಳು ತೋರಿಸುತ್ತವೆ’ ಎಂದು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.