ಕೋಟ್ಟಯಂ: ಮಧ್ಯ ಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್ಗಢ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಪರಾಭವಗೊಳಿಸಿ ಕಾಂಗ್ರೆಸ್ ಅಧಿಕಾರಕ್ಕೇರುತ್ತದೆ ಎಂದು ಕಾಂಗ್ರೆಸ್ ನೇತಾರ,ಕರ್ನಾಟಕ ರಾಜ್ಯದ ಕಾಂಗ್ರೆಸ್ ಪಕ್ಷದಉಸ್ತುವಾರಿ ನೋಡಿಕೊಳ್ಳುತ್ತಿರುವ ಕೆ.ಸಿ. ವೇಣುಗೋಪಾಲ್ ಹೇಳಿದ್ದಾರೆ.ಮಲಯಾಳ ಮನೋರಮಾ ಪತ್ರಿಕೆಯ ಇಂಗ್ಲಿಷ್ ಆವೃತ್ತಿ ಆನ್ ಮನೋರಮಾಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ವೇಣುಗೋಪಾಲ್, ಈ ರಾಜ್ಯಗಳಲ್ಲಿನ ಜನರಿಗೆ ಬಿಜೆಪಿ ಮೇಲೆ ಸಿಟ್ಟು ಇದೆ ಎಂದಿದ್ದಾರೆ.
ಅಂದಹಾಗೆ ಈ ರಾಜ್ಯಗಳಲ್ಲಿ ಗುಂಪುಗಾರಿಕೆ ಇದೆ ಅಲ್ಲವೇ ಎಂದು ಕೇಳಿದಾಗ, ಕಾಂಗ್ರೆಸ್ನಲ್ಲಿ ಗುಂಪುಗಾರಿಕೆ ಇದ್ದೇ ಇದೆ. ಆದರೆ ವಿರೋಧ ಪಕ್ಷದವರ ವಿರುದ್ಧ ಎಲ್ಲರೂ ಒಂದಾಗಿ ನಿಲ್ಲುತ್ತಾರೆ ಎಂದಿದ್ದಾರೆ ವೇಣುಗೋಪಾಲ್.
ಕರ್ನಾಟಕದಲ್ಲಿ ಕಾಂಗ್ರೆಸ್ ಜೆಡಿಎಸ್ ಜತೆ ಸೇರಿ ಸಮ್ಮಿಶ್ರಸರ್ಕಾರ ರಚನೆ ಮಾಡಿದ್ದರ ಹಿಂದಿರುವ ನಿಜವಾದ ಸೂತ್ರಧಾರ ರಾಹುಲ್ ಗಾಂಧಿ.ಚುನಾವಣಾ ಸಮೀಕ್ಷೆ ಬಂದಾಗ ನಮಗೆ ಕೆಲವು ಸಂದೇಹಗಳಿದ್ದವು.ಪ್ಲಾನ್ ಬಿ ಬೇಕು ಎಂಬ ನಮ್ಮ ಸಲಹೆಯನ್ನು ರಾಹುಲ್ ಒಪ್ಪಿಕೊಂಡರು.ಕಾಂಗ್ರೆಸ್ಗೆ ಬಹುಮತ ಸಿಗದೇ ಹೋದರೆ ಸ್ಥಾನಮಾನಗಳಿಗೆ ಹಂಬಲಿಸದೆ ಬಿಜೆಪಿಯನ್ನು ಅಧಿಕಾರಕ್ಕೇರದಂತೆ ತಡೆಯುವ ನಿರ್ಧಾರ ಕೈಗೊಳ್ಳಬೇಕೆಂದು ರಾಹುಲ್ ಆದೇಶ ನೀಡಿದ್ದರು.
ಜೆಡಿಎಸ್ ಜತೆ ಮೈತ್ರಿ ಮಾಡಿಕೊಳ್ಳುವ ತೀರ್ಮಾನ ರಾಹುಲ್ ಅವರದ್ದಾಗಿತ್ತು, ಆದಾಗ್ಯೂ, ಕಡಿಮೆ ಸೀಟು ಗಳಿಸಿದ ಜೆಡಿಎಸ್ಗೆ ಮುಖ್ಯಮಂತ್ರಿ ಸ್ಥಾನ ನೀಡಿರುವುದಕ್ಕೆ ಬೇಸರವಿಲ್ಲ.ಆ ಸಮ್ಮಿಶ್ರಸರ್ಕಾರ ಉತ್ತಮ ರೀತಿಯಲ್ಲಿ ಆಡಳಿತ ನಡೆಸುತ್ತದೆ.ಸಮಸ್ಯೆಗಳು ಬಂದಾಗ ಅದನ್ನು ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಬೇಕಾಗಿರುವ ವ್ಯವಸ್ಥೆಯನ್ನು ನಾವು ಕರ್ನಾಟಕದಲ್ಲಿ ಮಾಡಿದ್ದೇವೆ.
ರಾಹುಲ್ ನೇತೃತ್ವದಲ್ಲಿ ಪಕ್ಷವನ್ನು ಬೂತ್ ಮಟ್ಟದಲ್ಲೇ ಸದೃಢಗೊಳಿಸುವ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಕಾಂಗ್ರೆಸ್ ಕೆಡರ್ ಪಕ್ಷವಲ್ಲ, ಆದರೆ ಅರ್ಧದಷ್ಟಾದರೂ ಕೆಡರ್ ಪಕ್ಷದಂತಾಗಲು ನಾವು ಯತ್ನಿಸುತ್ತಿದ್ದೇವೆ.ತಾವು ಹೇಳುತ್ತಿರುವುದನ್ನು ಕೇಳಲು ನಾಯಕರು ಇಲ್ಲ ಎಂಬ ದೂರು ನಮ್ಮ ಕಾರ್ಯಕರ್ತರಿಂದ ಕೇಳಿ ಬಂದಿತ್ತು. ಆದರೆ ಈಗ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಕಾಂಗ್ರೆಸ್ನ ಕೆಲಸದ ರೀತಿಯಲ್ಲಿ ಬದಲಾವಣೆ ಆಗಿದೆ ಎಂದು ವೇಣುಗೋಪಾಲ್ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.