ರಾಯ್ಪುರ: ಹಿಂದೂ ಧಾರ್ಮಿಕ ಮುಖಂಡ ಕಾಳಿಚರಣ್ ಮಹಾರಾಜ್ ಅವರನ್ನು ಛತ್ತೀಸ್ಗಡದ ರಾಯ್ಪುರ ಜಿಲ್ಲೆಯ ಕೋರ್ಟ್ ಜನವರಿ 13ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಕಾಳಿಚರಣ್ ಬಂಧನಕ್ಕೆ ಸಂಬಂಧಿಸಿ ಮಧ್ಯಪ್ರದೇಶದ ಬಿಜೆಪಿ ಸರ್ಕಾರ ಮತ್ತು ಛತ್ತೀಸ್ಗಡದ ಕಾಂಗ್ರೆಸ್ ಸರ್ಕಾರದ ನಡುವೆ ವಾಗ್ವಾದ ಏರ್ಪಟ್ಟಿದೆ. 'ಛತ್ತೀಸ್ಗಡ ಪೊಲೀಸರು ಕಾಳಿಚರಣ್ ವಿರುದ್ಧದ ಕ್ರಮದ ಬಗ್ಗೆ ಸುಳಿವು ನೀಡಿಲ್ಲ' ಎಂದು ಮಧ್ಯಪ್ರದೇಶ ಸರ್ಕಾರ ಆರೋಪಿಸಿದೆ.
ಮಹಾತ್ಮ ಗಾಂಧಿ ವಿರುದ್ಧ ಆಕ್ಷೇಪಾರ್ಹ ಪದ ಬಳಕೆ ಮತ್ತು ನಾಥುರಾಮ್ ಗೋಡ್ಸೆಯನ್ನು ಶ್ಲಾಘಿಸಿದ ಪ್ರಕರಣಕ್ಕೆ ಸಂಬಂಧಿಸಿ ಛತ್ತೀಸ್ಗಡ ಪೊಲೀಸರು ಕಾಳಿಚರಣ್ ಮಹಾರಾಜ್ ಅವರನ್ನು ಗುರುವಾರ ಬೆಳಗ್ಗೆ ಬಂಧಿಸಿದ್ದರು. ಬಳಿಕ ರಾಯ್ಪುರ ಕೋರ್ಟ್ ಕಾಳಿಚರಣ್ ಅವರನ್ನು 2 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿತ್ತು.
ಪೊಲೀಸ್ ಕಸ್ಟಡಿಯಲ್ಲಿದ್ದ ಕಾಳಿಚರಣ್ ಅವರನ್ನು ಪ್ರಶ್ನಿಸಲಾಗಿದೆ. ಹೆಚ್ಚಿನ ವಿಚಾರಣೆ ನಡೆಸುವ ಅಗತ್ಯವಿಲ್ಲ ಎಂದು ಪೊಲೀಸರು ಶುಕ್ರವಾರ ಕೋರ್ಟ್ಗೆ ಹೇಳಿದ್ದಾರೆ.
ಮಹಾತ್ಮ ಗಾಂಧಿ ವಿರುದ್ಧ ಆಕ್ಷೇಪಾರ್ಹ ಪದ ಬಳಕೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೆಯಾದ ಬೆನ್ನಲ್ಲೇ ರಾಯ್ಪುರ ಪೊಲೀಸರು ಗುರುವಾರ ಬೆಳಗ್ಗೆ ಕಾಳಿಚರಣ್ ಅವರನ್ನು ಮಧ್ಯಪ್ರದೇಶದ ಕಜುರಾಹೋ ನಗರದಿಂದ 25 ಕಿ.ಮೀ. ದೂರದ ಭಾಗೇಶ್ವರ್ ಧಾಮ್ನಲ್ಲಿ ಬಂಧಿಸಿದ್ದರು.
ರಾಯ್ಪುರದಲ್ಲಿ ಡಿಸೆಂಬರ್ 26ರಂದು ಭಾನುವಾರ ನಡೆದ ಧರ್ಮ ಸಂಸತ್ನಲ್ಲಿ ಮಹಾತ್ಮ ಗಾಂಧಿ ವಿರುದ್ಧ ಆಕ್ಷೇಪಾರ್ಹ ಪದ ಬಳಸಲಾಗಿತ್ತು. ಗಾಂಧಿಯನ್ನು ಹತ್ಯೆ ಮಾಡಿದ್ದಕ್ಕೆ ನಾಥುರಾಮ್ ಗೋಡ್ಸೆಯನ್ನು ಶ್ಲಾಘಿಸಲಾಗಿತ್ತು. ಘಟನೆಗೆ ಸಂಬಂಧಿಸಿ ಕಾಳಿಚರಣ್ ಮತ್ತು ಇತರ ಧಾರ್ಮಿಕ ಮುಖಂಡರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.