ADVERTISEMENT

ಯೋಧರು, ಉಗ್ರರ ಮೃತದೇಹ ಕೊಂಡೊಯ್ಯಲು ನಿರಾಕರಿಸಿದ ಪಾಕಿಸ್ತಾನ?

ಬಿಳಿ ಬಾವುಟ ತೋರಿಸಿ, ಶವ ತಗೊಂಡು ಹೋಗುವಂತೆ ಸೂಚಿಸಿದ್ದ ಭಾರತೀಯ ಸೇನೆ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2019, 5:08 IST
Last Updated 7 ಆಗಸ್ಟ್ 2019, 5:08 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶ್ರೀನಗರ:ಉತ್ತರ ಕಾಶ್ಮೀರದಕುಪ್ವಾರ ಜಿಲ್ಲೆಯ ಅಂತರರಾಷ್ಟ್ರೀಯಗಡಿ ನಿಯಂತ್ರಣ ರೇಖೆಯ (ಎಲ್‌ಒಸಿ) ಸಮೀಪ ಗುಂಡಿನ ಚಕಮಕಿಯಲ್ಲಿ ಮೃತಪಟ್ಟ ಯೋಧರು ಮತ್ತು ಉಗ್ರರ ಶವಗಳನ್ನು ಕೊಂಡೊಯ್ಯುವ ಬಗ್ಗೆಪಾಕಿಸ್ತಾನ ಸೇನೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಗಡಿ ನಿಯಂತ್ರಣ ರೇಖೆ ಬಳಿಯ ಕೆರೆನ್ ವಲಯದಲ್ಲಿ ಪಾಕಿಸ್ತಾನಿ ಗಡಿ ಕಾರ್ಯಪಡೆ (ಬಿಎಟಿ) ಯೋಧರು ಮತ್ತು ಭಯೋತ್ಪಾದಕರು ಗಡಿ ನುಸುಳಿ ಭಾರತೀಯ ಸೇನಾ ಪೋಸ್ಟ್‌ಗಳ ಮೇಲೆ ದಾಳಿ ನಡೆಸಲು ಶನಿವಾರ ಪ್ರಯತ್ನಿಸಿದ್ದರು. ಪ್ರತಿ ದಾಳಿ ನಡೆಸಿದ್ದ ಭಾರತೀಯ ಸೇನೆಯು ಪಾಕಿಸ್ತಾನದ ಕಮಾಂಡೊಗಳು ಸೇರಿದಂತೆ ನಾಲ್ವರನ್ನು ಹತ್ಯೆ ಮಾಡಿತ್ತು.

ಈ ವಿಚಾರವನ್ನು ಭಾನುವಾರ ಪಾಕಿಸ್ತಾನಕ್ಕೆ ತಿಳಿಸಿದ್ದ ಭಾರತೀಯ ಸೇನೆಯು, ‘ಬಿಳಿ ಬಾವುಟ ಹಿಡಿದು ಬನ್ನಿ. ಐದು ಶವಗಳನ್ನು ತೆಗೆದುಕೊಂಡು ಹೋಗಿ, ಅಂತಿಮ ಸಂಸ್ಕಾರ ಮಾಡಿ’ ಎಂದು ಸೂಚಿಸಿತ್ತು. ಇದಕ್ಕೆ ಪಾಕಿಸ್ತಾನದ ಕಡೆಯಿಂದ ಪ್ರತಿಕ್ರಿಯೆ ಬಂದಿಲ್ಲ.

ADVERTISEMENT

‘ಕೆರೆನ್ ವಲಯದಲ್ಲಿ ನಿನ್ನೆ ಹತ್ಯೆಯಾದ ಪಾಕಿಸ್ತಾನೀಯರ ಮೃತದೇಹಗಳನ್ನು ಕೊಂಡೊಯ್ಯಲು ಪಾಕಿಸ್ತಾನಕ್ಕೆ ಸೂಚಿಸಲಾಗಿತ್ತು. ಆದರೆ ಅವರ ಕಡೆಯಿಂದ ಪ್ರತಿಕ್ರಿಯೆ ಬಂದಿಲ್ಲ’ ಎಂದು ಶ್ರೀನಗರ ಮೂಲದ ರಕ್ಷಣಾ ವಕ್ತಾರ ಕರ್ನಲ್ ರಾಜೇಶ್ ಕಾಲಿಯಾ ತಿಳಿಸಿದ್ದಾರೆ.

ಅತಿಕ್ರಮಣ: ಅಲ್ಲಗಳೆದ ಪಾಕಿಸ್ತಾನ

ಬಿಎಟಿ ಯೋಧರು ಮತ್ತು ಉಗ್ರರು ಜತೆಯಾಗಿ ನಡೆಸಿದ ಅತಿಕ್ರಮಣ ಪ್ರಯತ್ನವನ್ನು ವಿಫಲಗೊಳಿಸಿದ್ದು, ಕೆಲವು ಯೋಧರು ಮೃತಪಟ್ಟಿದ್ದಾರೆ ಎಂಬ ಭಾರತದ ಹೇಳಿಕೆಯನ್ನು ಪಾಕಿಸ್ತಾನ ಅಲ್ಲಗಳೆದಿದೆ.

ಇದು ಭಾರತದ ಪ್ರಚಾರ ತಂತ್ರ. ಕಾಶ್ಮೀರದಲ್ಲಿನ ಪ್ರಕ್ಷುಬ್ಧ ಸ್ಥಿತಿಯಿಂದ ಜಗತ್ತಿನ ಗಮನವನ್ನು ಬೇರೆಡೆಗೆ ಸೆಳೆಯಲು ಈ ತಂತ್ರ ಮಾಡಲಾಗಿದೆ ಎಂದು ಪಾಕಿಸ್ತಾನ ಸೇನೆಯ ವಕ್ತಾರ ಮೇ. ಜ. ಆಸಿಫ್‌ ಗಫೂರ್‌ ಹೇಳಿದ್ದಾರೆ.

ಪಾಕಿಸ್ತಾನದ ವಿದೇಶಾಂಗ ಸಚಿವಾಲಯವೂ ಶನಿವಾರ ರಾತ್ರಿ ಹೇಳಿಕೆ ಬಿಡುಗಡೆ ಮಾಡಿ ಭಾರತದ ಆರೋಪವನ್ನು ತಳ್ಳಿ ಹಾಕಿದೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.