ನವದೆಹಲಿ: ‘ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ‘ಶಾಪ ಮತ್ತು ನಿಂದನೆ’ಯ ರಾಜಕಾರಣ ಮಾಡುತ್ತಿದ್ದಾರೆ’ ಎಂದು ಬಿಜೆಪಿ ಆರೋಪಿಸಿದೆ. ಪ್ರಧಾನಿ ಮೋದಿ ಅವರು ರಾಜೀವ್ ಗಾಂಧಿ ಅವರನ್ನು ಟೀಕಿಸಿರುವುದನ್ನು ವಿರೋಧಿಸಿ ರಾಹುಲ್ ಅವರು ನೀಡಿರುವ ‘ಕರ್ಮ ಕಾಯುತ್ತಲಿದೆ...’ ಎಂಬ ಹೇಳಿಕೆಗೆ ಬಿಜೆಪಿ ಈ ಪ್ರತಿಕ್ರಿಯೆ ನೀಡಿದೆ.
‘ರಾಜೀವ್ ಗಾಂಧಿ ಅವರ ಸಾವಿನ ಬಗ್ಗೆ ಮೋದಿ ಟೀಕೆ ಮಾಡಿರಲಿಲ್ಲ. ಬದಲಿಗೆ, ಅವರ ಅವಧಿಯಲ್ಲಿ ಕಾಂಗ್ರೆಸ್ ಸರ್ಕಾರದ ಕಾರ್ಯವೈಖರಿಯನ್ನು ಟೀಕಿಸಿದ್ದರು. ಕರ್ಮ ಯಾರನ್ನೂ ಬಿಡುವುದಿಲ್ಲ. ಕಾಂಗ್ರೆಸ್ನವರು ಸಹ ತಾವು ಮಾಡಿರುವ ಕರ್ಮಗಳಿಗೆ ಭಾರಿ ಬೆಲೆ ತೆರಬೇಕಾಗುತ್ತದೆ’ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಮಾಧ್ಯಮಗೋಷ್ಠಿಯಲ್ಲಿ ಹೇಳಿದ್ದಾರೆ.
‘ಮೋದಿ ಅವರ ಹೇಳಿಕೆಗೆ ರಾಹುಲ್ ಹಾಗೂ ಪ್ರಿಯಾಂಕಾ ಅವರು ಆಕ್ರೋಶಭರಿತ ಪ್ರತಿಕ್ರಿಯೆ ನೀಡಿದ್ದಾರೆ. ಒಂದು ಸಾಮಾನ್ಯ ಕುಟುಂಬದಿಂದ ಬಂದ ಮೋದಿ, ದೇಶದ ಅತಿ ಎತ್ತರದ ಸ್ಥಾನದಲ್ಲಿ ಇರುವುದನ್ನು ಸಹಿಸಿಕೊಳ್ಳಲು ಅವರಿಗೆ ಸಾಧ್ಯವಾಗುತ್ತಿಲ್ಲ. ಅವರು ನೀಡಿರುವ ಪ್ರತಿಕ್ರಿಯೆಯು ವಂಶಾಡಳಿತದ ಸೊಕ್ಕನ್ನು ಪ್ರತಿನಿಧಿಸುತ್ತದೆ’ಎಂದರು.
‘ಬೊಫೋರ್ಸ್ ಹಗರಣ ಮತ್ತು 1984ರಲ್ಲಿ ದೆಹಲಿಯಲ್ಲಿ ನಡೆದ ಸಿಖ್ ಸಮುದಾಯದವರ ಹತ್ಯೆಗಳನ್ನು ಹಿನ್ನೆಲೆಯಲ್ಲಿಟ್ಟು ನೋಡಿದರೆ ಮೋದಿ ಅವರು ರಾಜೀವ್ ಬಗ್ಗೆ ಹೇಳಿರುವ ಮಾತುಗಳು ಸಂಪೂರ್ಣವಾಗಿ ಸತ್ಯವಾದವು’ ಎಂದು ಜಾವಡೇಕರ್ ಹೇಳಿದ್ದಾರೆ.
**
ರಾಜೀವ್ ಕುರಿತಾಗಿ ಮೋದಿ ನೀಡಿರುವ ಹೇಳಿಕೆಯು ಅವರಲ್ಲಿ ಮೂಡಿರುವ ಸೋಲಿನ ಭಯ ಹಾಗೂ ಹತಾಶೆಯ ಪ್ರತೀಕವಾಗಿದೆ.
-ಪಿ. ಚಿದಂಬರಂ, ಕಾಂಗ್ರೆಸ್ ಮುಖಂಡ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.