ADVERTISEMENT

ವರಿಷ್ಠರ ಸಭೆಯಲ್ಲಿ ಸಂಪುಟ ರಚನೆ ನಿರ್ಧಾರ: ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2021, 7:35 IST
Last Updated 2 ಆಗಸ್ಟ್ 2021, 7:35 IST
ಕೇಂದ್ರದ ಗೃಹ ಸಚಿವ ಅಮಿತ್ ಶಾ ಅವರನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರು ಭೇಟಿಯಾಗಿದ್ದ ಸಂದರ್ಭ–ಸಂಗ್ರಹ ಚಿತ್ರ
ಕೇಂದ್ರದ ಗೃಹ ಸಚಿವ ಅಮಿತ್ ಶಾ ಅವರನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರು ಭೇಟಿಯಾಗಿದ್ದ ಸಂದರ್ಭ–ಸಂಗ್ರಹ ಚಿತ್ರ   

ನವದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.‌ನಡ್ಡಾ ಹಾಗೂ ಇತ‌ರ ಮುಖಂಡರೊಂದಿಗೆ ಸಂಜೆ ಮತ್ತೊಂದು ಸುತ್ತಿನ ಸಮಾಲೋಚನೆ ನಡೆಸಿದ‌ ಬಳಿಕ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಕೇಂದ್ರದ ಗೃಹ ಸಚಿವ‌ ಅಮಿತ್ ಶಾ ಅವರ ಭೇಟಿಗಾಗಿ ಸೋಮವಾರ ಸಂಸತ್ ಭವನಕ್ಕೆ‌ ತೆರಳುವ‌ ಮುನ್ನ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಸಂಪುಟ ವಿಸ್ತರಣೆಗಾಗಿ ಪಕ್ಷವು ಪ್ರಮುಖ ಸೂತ್ರವೊಂದನ್ನು ಸಿದ್ಧಪಡಿಸಲಿದೆ. 'ಉಪ ಮುಖ್ಯಮಂತ್ರಿ ಯಾರಾಗಬೇಕು, ಎಷ್ಟು ಹಂತದಲ್ಲಿ ವಿಸ್ತರಣೆ ಆಗಬೇಕು, ಎಷ್ಟು ಜನ‌ ಸಂಪುಟದಲ್ಲಿರಬೇಕು' ಎಂಬುದು ಆ ಸೂತ್ರದ ಭಾಗ ಎಂದು ಅವರು ಹೇಳಿದರು.

ADVERTISEMENT

'ಬಿ.ಎಸ್. ಯಡಿಯೂರಪ್ಪ ಅವರ ಸಂಪುಟದಲ್ಲಿದ್ದ ಪ್ರಮುಖರನ್ನು ಹೊಸ ಸಂಪುಟದಲ್ಲಿ ಸೇರ್ಪಡೆ ಮಾಡಿಕೊಂಡು ಸಮತೋಲನ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಚರ್ಚೆ ನಡೆಸಲಾಗಿದೆ. ಪ್ರಾದೇಶಿಕತೆ, ಜಾತಿ, ಹಿರಿತನಕ್ಕೆ ಆದ್ಯತೆ ನೀಡುವ ಬಗ್ಗೆ ವರಿಷ್ಠರೇ ನಿರ್ಧರಿಸಲಿದ್ದಾರೆ ಎಂದು ಅವರು ತಿಳಿಸಿದರು.

ಸೋಮವಾರ ಸಂಜೆ ಅಥವಾ ಮಂಗಳವಾರ ವರಿಷ್ಠರು ಅಂತಿಮ ಪಟ್ಟಿಗೆ ಸಮ್ಮತಿ ಸೂಚಿಸಿದರೆ ಬುಧವಾರದ ವೇಳೆಗೆ ಹೊಸ ಸಚಿವರ ಪ್ರಮಾಣವಚನ ಸಮಾರಂಭ ನಡೆಯಲಿದೆ. ಇಲ್ಲದಿದ್ದರೆ ಸಮಾರಂಭ ಮತ್ತಷ್ಟು ವಿಳಂಬ ಆಗಲಿದೆ ಎಂದು ಅವರು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.