ಸಾಗಣೆಯಾಗದೆ ಉಳಿದ ಕಾಶ್ಮೀರ ಸೇಬು
ಪಿಟಿಐ ಚಿತ್ರ
ಶ್ರೀನಗರ: ಮಳೆಯಿಂದಾಗಿ ಬಂದ್ ಆಗಿರುವ ಹೆದ್ದಾರಿಗಳ ತೆರವಿಗೆ ಸರ್ಕಾರ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ, ಇದರಿಂದಾಗಿ ₹10 ಸಾವಿರ ಕೋಟಿಗೂ ಹೆಚ್ಚು ಮೌಲ್ಯದ ಬೆಳೆ ಹಾಳಾಗುವ ಅಪಾಯದಲ್ಲಿದೆ ಎಂದು ಕಾಶ್ಮೀರದ ಸೇಬು ಬೆಳೆಗಾರರು ಮತ್ತು ವ್ಯಾಪಾರಿಗಳು ಪ್ರತಿಭಟನೆ ಕೈಗೊಂಡಿದ್ದಾರೆ.
ಬಾರಾಮುಲ್ಲಾ ಮತ್ತು ಕುಪ್ವಾರಾದಲ್ಲಿ ಹಣ್ಣಿನ ಉದ್ಯಮವನ್ನೇ ನೆಚ್ಚಿಕೊಂಡಿರುವ ಹಲವರು ಬೀದಿಗಿಳಿದು ಸರ್ಕಾರದ ವಿರುದ್ಧ ಪ್ರತಿಭಟಿಸಿದರು.
ಪ್ರತಿಭಟನೆಯ ಭಾಗವಾಗಿ ಕಣಿವೆಯಾದ್ಯಂತ ಎರಡು ದಿನಗಳ ಕಾಲ ಹಣ್ಣಿನ ಅಂಗಡಿಗಳನ್ನು ಮುಚ್ಚಲಾಗಿದೆ. ಜಮ್ಮು –ಶ್ರೀನಗರದ ರಾಷ್ಟ್ರೀಯ ಹೆದ್ದಾರಿ ಕಳೆದ 4 ವಾರಗಳಿಂದ ಬಂದ್ ಆಗಿದೆ. ಹೀಗಾಗಿ ಸೇಬು ತುಂಬಿದ ವಾಹನಗಳ ಸಂಚಾರಕ್ಕೆ ವ್ಯವಸ್ಥೆ ಮಾಡಿಸಬೇಕು ಎಂದು ಕುಲ್ಗಾಮ್ನ ಸೇಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಜಹೂರ್ ಅಹಮದ್ ಹೇಳಿದ್ದಾರೆ.
‘ತೋಟಗಾರಿಕೆ ಕಾಶ್ಮೀರ ಆರ್ಥಿಕತೆಯ ಬೆನ್ನೆಲುಬಾಗಿದೆ. ಸಾರಿಗೆ ಸಮಸ್ಯೆಯಿಂದಾಗಿ ನಾವು ಕೋಟಿಗಟ್ಟಲೇ ನಷ್ಟ ಅನುಭವಿಸುವಂತಾಗಿದೆ. ಸೇಬು ಬೇಗನೆ ಹಾಳಾಗುವ ಹಣ್ಣು. ಗುಣಮಟ್ಟವನ್ನು ಕಾಪಾಡಿಕೊಳ್ಳಲು ಮತ್ತು ತಕ್ಕ ಬೆಲೆಯನ್ನು ಪಡೆಯಲು ಸಮಯಕ್ಕೆ ಸರಿಯಾಗಿ ಮಾರುಕಟ್ಟೆಗೆ ತಲುಪಿಸುವುದು ಮುಖ್ಯವಾಗಿದೆ’ ಎಂದು ಅಹಮದ್ ಅಳಲು ತೋಡಿಕೊಂಡಿದ್ದಾರೆ.
ಈ ಮಧ್ಯೆ ಲೆ.ಗವರ್ನರ್ ಮೋನಜ್ ಸಿನ್ಹಾ ಸೋಮವಾರ ಕಾಶ್ಮೀರದಿಂದ ದೆಹಲಿಗೆ ಸೇಬು ಹಣ್ಣುಗಳ ಸಾಗಣೆಗೆ ಕಾರ್ಗೋ ಸರಕು ರೈಲಿನ ವ್ಯವಸ್ಥೆಗೆ ಚಾಲನೆ ನೀಡಿದ್ದು, 23–24 ಟನ್ಗಳಷ್ಟು ಸೇಬು ಹಣ್ಣುಗಳನ್ನು ದಿನನಿತ್ಯ ದೆಹಲಿಗೆ ರವಾನಿಸಲಾಗುವುದು ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.