ಚಂಡೀಗಡ: ಕೋವಿಡ್–19 ಲಸಿಕೆ ಪೂರೈಕೆ ವಿಚಾರದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ರಾಜಕೀಯ ಮಾಡುತ್ತಿದ್ದಾರೆ ಎಂದು ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ದೂರಿದ್ದಾರೆ.
ರಾಷ್ಟ್ರ ರಾಜಧಾನಿಗೆ ಇತರ ರಾಜ್ಯಗಳಿಂದ ಹೆಚ್ಚಿನ ಲಸಿಕೆ ಪೂರೈಕೆಯಾಗಿದೆ ಎಂದೂ ಖಟ್ಟರ್ ಹೇಳಿದ್ದಾರೆ.
‘ಕೇಜ್ರಿವಾಲ್ ಯಾವತ್ತೂ ಟೀಕೆಯ ಧ್ವನಿಯಲ್ಲೇ ಮಾತನಾಡುತ್ತಾರೆ. ಹಾಗೆ ನೋಡಿದರೆ, ಆರೋಗ್ಯವು ರಾಜ್ಯಕ್ಕೆ ಸಂಬಂಧಿಸಿದ ವಿಚಾರ. ಇದು ಸಾಂಕ್ರಾಮಿಕ ರೋಗವಾಗಿರುವುದರಿಂದ, ರಾಜ್ಯದ ಪ್ರಯತ್ನಗಳಿಗೆ ಸಹಾಯ ಮಾಡುವುದು ಮತ್ತು ನೆರವು ನೀಡುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ಈವರೆಗೆ ಲಸಿಕೆಯನ್ನು ಕೇಂದ್ರ ಸರ್ಕಾರವೇ ಪೂರೈಸಿದೆ. ಪ್ರತಿ ಹತ್ತು ಲಕ್ಷ ಜನಸಂಖ್ಯೆಗೆ ಅನುಗುಣವಾಗಿ ನೋಡಿದರೆ ದೆಹಲಿಗೆ ಇತರ ರಾಜ್ಯಗಳಿಗಿಂತ ಹೆಚ್ಚು ಲಸಿಕೆ ಪೂರೈಕೆಯಾಗಿದೆ’ ಎಂದು ಖಟ್ಟರ್ ಹೇಳಿದ್ದಾರೆ.
ಕೇಂದ್ರ ಸರ್ಕಾರವು ದೆಹಲಿಗೆ ಮಾತ್ರವಲ್ಲದೆ ಎಲ್ಲ ರಾಜ್ಯಗಳಿಗೂ ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆಯ ಡೋಸ್ಗಳನ್ನು ಪೂರೈಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
‘ನಾವೂ ಸಹ ದಿನವೊಂದಕ್ಕೆ 2 ಲಕ್ಷ ಜನರಿಗೆ ಲಸಿಕೆ ನೀಡಬಹುದು. ಆದರೆ ಲಸಿಕೆಯ ದಾಸ್ತಾನು ನಿರ್ವಹಿಸುವ ಸಲುವಾಗಿ 50ರಿಂದ 60 ಸಾವಿರ ಮಂದಿಗಷ್ಟೇ ಲಸಿಕೆ ನೀಡುತ್ತಿದ್ದೇವೆ. ಅರವಿಂದ ಕೇಜ್ರಿವಾಲ್ ಅವರಿಗೆ ಇದು ತಿಳಿದಿರಬಹುದು. ಆದರೆ ಅವರು ರಾಜಕೀಯ ಮಾಡಲು ಬಯಸುತ್ತಿದ್ದಾರೆ’ ಎಂದು ಖಟ್ಟರ್ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.