ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಓರ್ವ ಭಯೋತ್ಪಾದಕ ಎನ್ನಲು ಸಾಕಷ್ಟು ಆಧಾರಗಳಿವೆ ಎಂದು ಬಿಜೆಪಿ ನಾಯಕ ಪ್ರಕಾಶ್ ಜಾವಡೇಕರ್ ಕಿಡಿಕಾರಿದರು.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಸೋಮವಾರ ಮಾತನಾಡಿದ ಅವರು, ‘ಕೇಜ್ರಿವಾಲ್ ಮುಗ್ಧರಂತೆ ನಾಟಕವಾಡುತ್ತಿದ್ದಾರೆ. ಕೇಜ್ರಿವಾಲ್ ತಮ್ಮನ್ನು ತಾವು ಅರಾಜಕತಾವಾದಿ ಎಂದು ಹಲವುಬಾರಿ ಕರೆದುಕೊಂಡಿದ್ದರು. ಅರಾಜಕತೆ ಪ್ರತಿಪಾದಕರಿಗೂ ಭಯೋತ್ಪಾದಕರಿಗೂ ವ್ಯತ್ಯಾಸ ಏನಿದೆ?’ ಎಂದು ಪ್ರಶ್ನಿಸಿದರು.
ಮತ್ತೊಂದೆಡೆ ಮಾಡೆಲ್ ಟೌನ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಪಿಲ್ ಮಿಶ್ರಾ ಮಾತನಾಡಿ, ‘ಆಮ್ ಆದ್ಮಿ ಪಕ್ಷದ ಹೆಸರನ್ನು ಮುಸ್ಲಿಂ ಲೀಗ್ ಎಂದು ಬದಲಿಸಬೇಕು’ ಎಂದು ಒತ್ತಾಯಿಸಿದರು.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ದೆಹಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳುವುದು ತಡೆಯಬೇಕು’ ಎಂದು ಚುನಾವಣಾ ಆಯೋಗಕ್ಕೆ ಆಪ್ ಒತ್ತಾಯಿಸಿತ್ತು. ಈ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಆಪ್ ವಿರುದ್ಧ ಹರಿಹಾಯುತ್ತಿದ್ದಾರೆ.
‘ಆಪ್ನ ಹೊಸ ಹೆಸರು ಮುಸ್ಲಿಂ ಲೀಗ್ ಎಂದು ಇಡಬೇಕು. ಉಮರ್ ಖಾಲಿದ್, ಅಫ್ಜಲ್ ಗುರು, ಬುರ್ಹಾನ್ ವಾನಿ ಸೇರಿದಂತೆ ಭಯೋತ್ಪಾದಕರನ್ನು ತಮ್ಮ ತಂದೆ ಎಂದುಕೊಳ್ಳುವವರಿಗೆ ಯೋಗಿ ಆದಿತ್ಯನಾಥರ ಬಗ್ಗೆ ಭಯವಿದೆ’ ಎಂದು ಮಿಶ್ರಾ ಟ್ವೀಟ್ ಮಾಡಿದ್ದರು.
‘ಶಾಹೀನ್ ಬಾಗ್ ಒಂದು ಮಿನಿ ಪಾಕಿಸ್ತಾನ, ದೆಹಲಿ ಚುನಾವಣೆಯು ಭಾರತ ಮತ್ತು ಪಾಕ್ ನಡುವಣ ಸಂಘರ್ಷ’ ಎಂದು ಟೀಕಿಸಿದ್ದರಿಂದ ಮಿಶ್ರಾ ಅವರ ಪ್ರಚಾರಕ್ಕೆಆಯೋಗವು 48 ತಾಸುಗಳ ನಿರ್ಬಂಧ ವಿಧಿಸಿತ್ತು. ನಿಷೇಧದ ನಂತರವೂ ತಾವು ನೀಡಿದ ಹೇಳಿಕೆಗಳಿಗೆವಿಷಾದ ವ್ಯಕ್ತಪಡಿಸುವುದಿಲ್ಲ ಎಂದು ಮಿಶ್ರಾ ಹೇಳಿದ್ದರು.
ದೆಹಲಿಯಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಮೆಗಾ ರ್ಯಾಲಿಗಳಲ್ಲಿ ಭಾಷಣ ಮಾಡಲಿದ್ದಾರೆ. ದೆಹಲಿ ಚುನಾವಣಾ ದಿನಾಂಕ ಘೋಷಣೆಯಾದ ನಂತರ ಮೋದಿ ಅವರ ಮೊದಲ ರ್ಯಾಲಿ ಇಂದು ನಡೆಯಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.