ನವದೆಹಲಿ: 'ದಿ ಗ್ರೇಟ್ ಖಲಿ' ಎಂದೇ ಖ್ಯಾತರಾದ ಡಬ್ಲ್ಯುಡಬ್ಲ್ಯುಇ ತಾರೆ ದಲೀಪ್ ಸಿಂಗ್ ರಾಣಾ ಅವರನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗುರುವಾರ ಭೇಟಿಯಾಗಿದ್ದಾರೆ.
ಈ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ) ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಖಲಿ, ಬೆಂಬಲವನ್ನು ಸೂಚಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಕೇಜ್ರಿವಾಲ್, 'ಇಂದು (ಗುರುವಾರ) ನಾನು ದಿ ಗ್ರೇಟ್ ಖಲಿ ಅವರನ್ನು ಭೇಟಿಯಾಗಿದ್ದೇನೆ. ಅವರು ಭಾರತವನ್ನು ವಿಶ್ವದಾದ್ಯಂತ ಪ್ರಸಿದ್ಧಗೊಳಿಸಿದ್ದಾರೆ. ದೆಹಲಿಯಲ್ಲಿ ವಿದ್ಯುತ್, ನೀರು, ಶಾಲೆ ಮತ್ತು ಆಸ್ಪತ್ರೆಯಲ್ಲಿ ಮಾಡಿದ ಕೆಲಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ' ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಅವರೊಂದಿಗಿನ ಸಂಭಾಷಣೆಯ ವೇಳೆಯಲ್ಲಿ ದೆಹಲಿ ಮಾದರಿಯ ಅಭಿವೃದ್ಧಿ ಕಾರ್ಯಗಳನ್ನು ದೇಶದ ಇತರೆ ಭಾಗಗಳೊಂದಿಗೆ ಹೋಲಿಕೆ ಮಾಡಲಾಯಿತು. ಅಲ್ಲದೆ ರಾಷ್ಟ್ರ ರಾಜಧಾನಿಯಲ್ಲಿ ಇಂತಹ ಕೆಲಸ ನಡೆಯುತ್ತಿರುವುದನ್ನು ನೋಡಿ ದಿ ಗ್ರೇಟ್ ಖಲಿ ಹೆಮ್ಮೆಪಟ್ಟುಕೊಂಡಿದ್ದಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ದೆಹಲಿಯ ಅಭಿವೃದ್ಧಿಯಿಂದ ಪ್ರಭಾವಿತಗೊಂಡಿರುವ ಖಲಿ, ಸಮಾಜ ಕಲಾಣ್ಯಕ್ಕಾಗಿ ಕೇಜ್ರಿವಾಲ್ ಸರ್ಕಾರವನ್ನು ಬೆಂಬಲಿಸಲು ಸಿದ್ದವಿರುವುದಾಗಿ ಪ್ರಕಟಣೆ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.