ನವದೆಹಲಿ: 2016 ರಲ್ಲಿ ಜೆಎನ್ಯು ಆವರಣದಲ್ಲಿ ದೇಶವಿರೋಧಿ ಘೋಷಣೆ ಕೂಗಿದವರಿಗೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಬೆಂಬಲ ನೀಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಗುರುವಾರ ಆರೋಪಿಸಿದ್ದಾರೆ.
ದೇಶದ್ರೋಹ ಆರೋಪ ಪ್ರಕರಣದಲ್ಲಿ ಜೆಎನ್ಯು ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಅವರ ವಿಚಾರಣೆಗೆ ಕೇಜ್ರಿವಾಲ್ ಅವರು ಅನುಮತಿ ನೀಡದಕ್ಕೆ ಜಾವಡೇಕರ್ ಈ ಆರೋಪ ಮಾಡಿದ್ದಾರೆ.
ಕನ್ಹಯ್ಯಾ ಮತ್ತು ಇತರರು ದೇಶದ್ರೋಹ ಆರೋಪ ಎದುರಿಸುತ್ತಿದ್ದಾರೆ. ನ್ಯಾಯಾಲಯಗಳು ಪದೇ ಪದೇ ಮನವಿ ಮಾಡಿದ್ದರೂ ಕೇಜ್ರಿವಾಲ್ ಮತ್ತು ಅವರ ಸರ್ಕಾರ ಅನುಮತಿ ನೀಡಿಲ್ಲ ಎಂದು ದೂರಿದರು.
‘ದೇಶವಿರೋಧಿ ಘೋಷಣೆಗೆ ಕೇಜ್ರಿವಾಲ್ ಬೆಂಬಲ ನೀಡುತ್ತಿದ್ದಾರೆ ಎಂಬುದನ್ನು ಅವರ ಧೋರಣೆಯೇ ತೋರಿಸುತ್ತಿದೆ. ಇಲ್ಲದಿದ್ದರೆ ಅವರು ವಿಚಾರಣೆಗೆ ಅನುಮತಿ ಕೊಡುತ್ತಿದ್ದರು’ ಎಂದು ಸಚಿವರು ಹೇಳಿದರು.
ಜನವರಿ 14 ರಂದು ಕನ್ಹಯಾ ಕುಮಾರ್ ಮತ್ತು ಇತರರ ವಿರುದ್ಧ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.