ADVERTISEMENT

ಕೇರಳ ಪ್ರವಾಹ ಪರಿಹಾರ ನಿಧಿಗೆ ದೇಣಿಗೆ: ಅಧಿಕೃತ ಪ್ರಕಟಣೆ ಹೊರಡಿಸಿಲ್ಲ ಎಂದ ಯುಎಇ

ಏಜೆನ್ಸೀಸ್
Published 24 ಆಗಸ್ಟ್ 2018, 7:41 IST
Last Updated 24 ಆಗಸ್ಟ್ 2018, 7:41 IST
   

ನವದೆಹಲಿ: ಕೇರಳ ಪ್ರವಾಹ ಪರಿಹಾರ ನಿಧಿಗೆ ಯುಎಇ ನೀಡಿರುವ ₹700 ಕೋಟಿ ಸೇರಿದಂತೆ ವಿದೇಶಗಳಿಂದ ಹರಿದುಬರುತ್ತಿರುವ ದೇಣಿಗೆಯನ್ನು ಸ್ವೀಕರಿಸಬೇಕೆ ಇಲ್ಲವೇ ಎಂಬ ಬಗ್ಗೆದೇಶದಾದ್ಯಂತ ವ್ಯಾಪಕ ಚರ್ಚೆಯಾಗುತ್ತಿದೆ. ಈ ಹೊತ್ತಿನಲ್ಲೇ ಕೇರಳಕ್ಕೆ ಪ್ರವಾಹ ಪರಿಹಾರ ನೀಡುವ ವಿಚಾರದಲ್ಲಿ ಇಂತಿಷ್ಟು ಮೊತ್ತದ ಆರ್ಥಿಕ ನೆರವು ನೀಡುತ್ತೇವೆ ಎಂಬ ಯಾವುದೇ ಅಧಿಕೃತ ಪ್ರಕಟಣೆಗಳನ್ನು ಹೊರಡಿಸಿಲ್ಲಎಂದು ಯುಎಇ ರಾಯಭಾರಿ ಅಹ್ಮದ್‌ ಅಲ್ಬಾನ್ನಾ ಹೇಳಿದ್ದಾರೆ.

‘ಪ್ರವಾಹದ ನಂತರ ಕೇರಳದಲ್ಲಿ ಉಂಟಾದ ಪರಿಣಾಮಗಳ ಕುರಿತು ಈಗಷ್ಷೇ ಪರಿಶೀಲನೆಗಳು ನಡೆಯುತ್ತಿವೆ. ಪರಿಹಾರ ನಿಧಿಗೆ ನಿರ್ದಿಷ್ಟ ಮೊತ್ತದ ದೇಣಿಗೆ ನೀಡುವ ನಿರ್ಧಾರ ಇನ್ನೂ ಅಂತಿಮವಾಗಿಲ್ಲ. ಈ ಕುರಿತು ಚಿಂತನೆ ನಡೆಸಲಾಗುತ್ತಿದೆ’ ಎಂದು ಅವರು ಹೇಳಿದ್ದಾರೆ.

ಕೇರಳ ನೆರೆ ಪರಿಹಾರ ನಿಧಿಗೆ ಯುಎಇ (ಯುನೈಟೆಡ್‌ ಅರಬ್‌ ಎಮಿರೇಟ್ಸ್‌) ದೇಶ ₹ 700 ಕೋಟಿ ದೇಣಿಗೆ ನೀಡಲಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಂಗಳವಾರ ತಿಳಿಸಿದ್ದರು.

ADVERTISEMENT

ಆದರೆ ದೇಣಿಗೆ ನೀಡುವ ಕುರಿತು ಸ್ಪಷ್ಟನೆ ನೀಡಿರುವ ಅಲ್ಬನ್ನಾ, ‘ಯುಎಇ ಉಪಾಧ್ಯಕ್ಷ ಹಾಗೂ ಪ್ರಧಾನ ಮಂತ್ರಿಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೂಮ್ ಅವರು ರಚಿಸಿರುವ ರಾಷ್ಟ್ರೀಯ ತುರ್ತು ಪರಿಸ್ಥಿತಿ ಸಮಿತಿಯು ಈ ಬಗ್ಗೆ ತೀರ್ಮಾನ ಕೈಗೊಳ್ಳಲಿದೆ. ಕೇರಳ ಪ್ರವಾಹದಲ್ಲಿ ಸಿಲುಕಿರುವ ಜನರಿಗೆ ಅಗತ್ಯವಿರುವ ನೆರವು, ಸಾಮಗ್ರಿಗಳು, ಆಹಾರ, ಔಷಧ ಹಾಗೂ ಇನ್ನಿತರೆ ವಸ್ತುಗಳನ್ನು ಒದಗಿಸುವುದು ಇದರ ಉದ್ದೇಶ’ ಎಂದಿದ್ದಾರೆ.

‘ಭಾರತದಲ್ಲಿರುವ ಹಣಕಾಸುನಿಯಮಾವಳಿಗಳ ಬಗ್ಗೆ ತಿಳಿದಾಗಿನಿಂದ ಸಮಿತಿಯು ಫೆಡರಲ್‌ ಅಧಿಕಾರಿಗಳೊಂದಿಗೆ ಸಂವಹನ ನಡೆಸುತ್ತಿದೆ. ತುರ್ತು ಪರಿಹಾರ ಹಾಗೂ ಆಹಾರ ಸಾಮಗ್ರಿ ಒದಗಿಸುವ ಸಲುವಾಗಿ ಸ್ಥಳೀಯ ಆಡಳಿತದ ಜೊತೆಗೂ ಸಂಪರ್ಕದಲ್ಲಿದೆ. ನಾವು ಯುಎಇಯ ರೆಡ್‌ ಕ್ರೆಸೆಂಟ್‌ನಂತಹ ಸರ್ಕಾರೇತರ ಸಂಸ್ಥೆಗಳು ಹಾಗೂ ಭಾರತದ ಕೆಲವು ಸಂಸ್ಥೆಗಳಜೊತೆಗೆ ಕಾರ್ಯನಿರ್ವಹಿಸುತ್ತಿದ್ದೇವೆ’

‘ಕೇರಳದಿಂದ ಸುಡಾನ್‌ವರೆಗೆ, ಬಾಂಗ್ಲಾದೇಶದಿಂದ ಸೊಮಾಲಿಯಾವರೆಗೆ ಮಾನವೀಯ ನೆರವು ನೀಡುವಲ್ಲಿ ಯುಎಇ ವಿಶ್ವವನ್ನು ಮುನ್ನಡೆಸುತ್ತಿದೆ ’ಎಂದ ಅವರು, ‘ಇದು ಯುಎಇಯ ಜವಾಬ್ದಾರಿಯೂ ಆಗಿದೆ’ ಎಂದು ಹೇಳಿದರು.

ಕೇಂದ್ರ ಸಚಿವ ಅಲ್ಫೋನ್ಸ್ ಕಣ್ಣಂತಾನಂ ಅವರು, ‘ದೇಣಿಗೆ ಪಡೆಯಲು ಅವಕಾಶ ನೀಡುವಂತೆ ಹಿರಿಯ ಸಚಿವರಲ್ಲಿ ಮನವಿ ಮಾಡುತ್ತೇನೆ. ಕೇರಳವನ್ನು ಪುನಃ ಸ್ಥಾಪಿಸಲು ನೆರವಿನ ಅಗತ್ಯವಿದೆ. ದೇಶದ ಅಭಿವೃದ್ಧಿ ಹಾಗೂ ವಿದೇಶಾಂಗ ವ್ಯವಹಾರಗಳಲ್ಲಿ ಕೇರಳಸಾಕಷ್ಟು ಕೊಡುಗೆ ನೀಡಿದೆ’ ಎಂದಿದ್ದಾರೆ.

ಇನ್ನಷ್ಟು ಸುದ್ದಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.