ADVERTISEMENT

ಕೇರಳ: ನಾಮಪತ್ರ ತಿರಸ್ಕೃತ; ಬಿಜೆಪಿ ಅಭ್ಯರ್ಥಿಗಳು ಸಲ್ಲಿಸಿದ್ದ ಅರ್ಜಿ ವಜಾ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2021, 15:28 IST
Last Updated 22 ಮಾರ್ಚ್ 2021, 15:28 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೊಚ್ಚಿ: ಕೇರಳ ವಿಧಾನಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಹಿನ್ನೆಡೆ ಅನುಭವಿಸಿದ್ದು, ಮೂವರು ಅಭ್ಯರ್ಥಿಗಳ ನಾಮಪತ್ರಗಳನ್ನು ಚುನಾವಣಾ ಆಯೋಗವು ತಿರಸ್ಕಾರಗೊಳಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಮನವಿಯನ್ನು ಸೋಮವಾರ ಹೈಕೋರ್ಟ್ ವಜಾಗೊಳಿಸಿದೆ.

ಚುನಾವಣೆ ಅಧಿಸೂಚನೆ ಹೊರಡಿಸಿದ ಬಳಿಕ ನ್ಯಾಯಾಲಯವು ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂಬ ಚುನಾವಣಾ ಆಯೋಗದ ವಾದವನ್ನು ನ್ಯಾಯಮೂರ್ತಿ ಎನ್. ನಾಗರೇಶ್ ಅವರು ಎತ್ತಿ ಹಿಡಿದಿದ್ದಾರೆ.

ನಾಮಪತ್ರಗಳ ಸೂಕ್ಷ್ಮ ಪರಿಶೋಧನೆ ವೇಳೆಯಲ್ಲಿ ಅಗತ್ಯ ದಾಖಲೆ ಪತ್ರಗಳನ್ನು ಹೊಂದಿರದ ಕಾರಣ ಬಿಜೆಪಿಯ ಎನ್. ಹರಿದಾಸ್, ನಿವೇದಿತಾ ಸುಬ್ರಮಣಿಯನ್ ಮತ್ತು ಎಐಎಡಿಎಂಕೆ ಅಭ್ಯರ್ಥಿ ಆರ್. ಎಂ. ಧನಲಕ್ಷ್ಮಿ ಅವರ ನಾಮಪತ್ರಗಳನ್ನು ಚುನಾವಣಾ ಆಯೋಗವು ತಿರಸ್ಕೃತಗೊಳಿಸಿತ್ತು.

ADVERTISEMENT

ಇದರ ವಿರುದ್ಧ ನ್ಯಾಯಾಲಯದ ಮೊರೆಹೋದ ಹಿನ್ನೆಲೆಯಲ್ಲಿ ಭಾನುವಾರ ವಿಶೇಷಪೀಠದಲ್ಲಿ ಅರ್ಜಿ ಪರಿಶೀಲಿಸಲಾಗಿತ್ತು.

ಹರಿದಾಸ್ ಕಣ್ಣೂರು ಜಿಲ್ಲೆಯ ತಲಶೇರಿ, ನಿವೇದಿತಾ ತ್ರಿಶೂರ್‌ನ ಗುರುವಾಯೂರ್ ಮತ್ತು ಧನಲಕ್ಷ್ಮಿ ಇಡುಕ್ಕಿ ಜಿಲ್ಲೆಯ ದೇವಿಕುಳಂ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದರು.

ಏತನ್ಮಧ್ಯೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಮತದಾನದ ವ್ಯಾಪಾರ ನಡೆಯುತ್ತಿದ್ದು, ಬಿಜೆಪಿ ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತಗೊಂಡಿರುವುದು ಇದರ ಸೂಚನೆಯಾಗಿದೆ ಎಂದು ಸಿಪಿಐ(ಎ) ಕಣ್ಣೂರು ಜಿಲ್ಲೆಯ ಕಾರ್ಯದರ್ಶಿ ಎಂ.ವಿ. ಜಯರಾಜನ್ ಆರೋಪಿಸಿದ್ದಾರೆ.

ಕೇರಳದಲ್ಲಿ ಏಪ್ರಿಲ್ 6ರಂದು ಒಂದೇ ಹಂತದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಮೇ 2ರಂದು ಮತ ಎಣಿಕೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.