ADVERTISEMENT

ಸಿಸ್ಟರ್ ಅಭಯಾ ಪ್ರಕರಣ: ಅಪರಾಧಿಗಳಿಗೆ ಪೆರೋಲ್ ನೀಡಿದ್ದಕ್ಕೆ ಹೈಕೋರ್ಟ್ ಗರಂ

ಕೇರಳ ಸರ್ಕಾರದ ಪ್ರತಿಕ್ರಿಯೆ ಕೇಳಿರುವ ಉನ್ನತ ನ್ಯಾಯಾಲಯ

ಪಿಟಿಐ
Published 12 ಜುಲೈ 2021, 13:16 IST
Last Updated 12 ಜುಲೈ 2021, 13:16 IST
ಸಿಸ್ಟರ್ ಅಭಯಾ
ಸಿಸ್ಟರ್ ಅಭಯಾ   

ತಿರುವನಂತಪುರಂ: ಕೇರಳದ ಸಿಸ್ಟರ್ ಅಭಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿಗಳಿಗೆ ನೀಡಿರುವ ಪೆರೋಲ್ ರದ್ದುಗೊಳಿಸಬೇಕೆಂದು ಸಲ್ಲಿಕೆಯಾಗಿರುವ ಅರ್ಜಿಯನ್ನು ಕೇರಳ ಹೈಕೋರ್ಟ್ ಸೋಮವಾರ ವಿಚಾರಣೆ ನಡೆಸಿತು.

ಇದಕ್ಕೆ ಸಂಬಂಧಿಸಿದಂತೆ ಕೇರಳ ಸರ್ಕಾರದ ಪ್ರತಿಕ್ರಿಯೆ ಕೇಳಿರುವ ಉನ್ನತ ನ್ಯಾಯಾಲಯ, ಕೇರಳ ಕಾರಾಗೃಹ ಇಲಾಖೆಯ ಡಿಜಿ ಮತ್ತು ಅಪರಾಧಿಗಳಾದ ಪಾದರ್ ಥಾಮಸ್ ಕೊಟ್ಟೂರು ಹಾಗೂ ಸಿಸ್ಟರ್ ಸೆಫಿ ಅವರಿಗೆ ನೋಟಿಸ್ ನೀಡಿದೆ.

ನ್ಯಾಯಮೂರ್ತಿಗಳಾದ ಕೆ.ವಿನೋದ್ ಚಂದ್ರನ್, ಜಿಯಾದ್ ರೆಹಮಾನ್ ಎಎ ಅವರನ್ನೊಳಗೊಂಡ ನ್ಯಾಯಪೀಠ ಅರ್ಜಿಯ ವಿಚಾರಣೆ ನಡೆಸುತ್ತಿದೆ. ಮಾನವ ಹಕ್ಕುಗಳ ಕಾರ್ಯಕರ್ತ ಹಾಗೂ ಪ್ರಕರಣದ ಪ್ರಮುಖ ಸಾಕ್ಷಿಯಾಗಿರುವ ಜೋಮನ್ ಪುಥೇನ್ ಪುರಕಲ್ ಅವರು ಅಪರಾಧಿಗಳಿಗೆ ನೀಡಿರುವ ಪೆರೋಲ್ ರದ್ದು ಮಾಡಬೇಕು ಎಂದು ಹೈಕೋರ್ಟಗೆ ಅರ್ಜಿ ಸಲ್ಲಿಸಿದ್ದರು.

ADVERTISEMENT

ಕೊರೊನಾ ಹಿನ್ನೆಲೆಯಲ್ಲಿ ಥಾಮಸ್ ಹಾಗೂ ಸೆಫಿ ಅವರಿಗೆ ಕಳೆದ ಮೇ 11 ರಂದು ಕೇರಳ ಕಾರಾಗೃಹ ಡಿಜಿ ಅವರು, 90 ದಿನದ ಪೆರೋಲ್ ನೀಡಿದ್ದರು. ಆದರೆ, ಜೂನ್ 28 ರಂದು ಈ ಬಗ್ಗೆ ಸ್ಪಷ್ಟನೆ ನೀಡಿದ್ದ ಡಿಜಿ, ಇದು ರಾಜ್ಯ ಸರ್ಕಾರ ಕೈಗೊಂಡ ತೀರ್ಮಾನ ಎಂದು ಹೇಳಿದ್ದರು.

1992 ಮಾರ್ಚ್ 27 ರಂದು ಕೇರಳದ ಕೊಟ್ಟಾಯಂನ ಸೇಂಟ್ ಪಿಯೂಷ್ ವಸತಿ ಶಾಲೆಯ ಬಾವಿಯಲ್ಲಿ 21 ವರ್ಷದ ಸಿಸ್ಟರ್ ಅಭಯಾ ಮೃತ ದೇಹ ಪತ್ತೆಯಾಗಿತ್ತು. ತನಿಖೆ ನಡೆಸಿದ್ದ ಸಿಬಿಐ, ಪಾದರ್ ಥಾಮಸ್ ಹಾಗೂ ಸಿಸ್ಟರ್ ಸೆಫಿ ಅಕ್ರಮ ಸಂಬಂಧವನ್ನು ಕಂಡಿದ್ದಕ್ಕೆ ಅಭಯಾ ಕೊಲೆ ಮಾಡಿ ಬಾವಿಯಲ್ಲಿ ಬಿಸಾಕಿದ್ದರು ಎಂಬ ಆರೋಪ ಸಾಬೀತಾಗಿತ್ತು. 2020 ರ ಡಿಸೆಂಬರನಲ್ಲಿ ಸಿಬಿಐ ವಿಶೇಷ ನ್ಯಾಯಾಲಯ ಈ ಇಬ್ಬರಿಗೂ ಜೀವಾವಧಿ ಶಿಕ್ಷೆಯನ್ನು ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.