
ಕೊಚ್ಚಿ: 'ದಿ ಕೇರಳ ಸ್ಟೋರಿ 2' ಚಿತ್ರಕ್ಕೆ ನೀಡಿರುವ ಪ್ರಮಾಣೀಕರಣವನ್ನು ರದ್ದುಗೊಳಿಸಬೇಕು ಹಾಗೂ ಸಿನಿಮಾದ ಶೀರ್ಷಿಕೆಯ ಮರುಪರಿಶೀಲನೆ ಸೇರಿದಂತೆ ಕೆಲವು ಬದಲಾವಣೆಗಳನ್ನು ಮಾಡುವ ಕುರಿತು ನಿರ್ದೇಶನ ನೀಡಬೇಕೆಂದು ಕೋರಿ ಕಣ್ಣೂರು ಮೂಲದವರು ಸಲ್ಲಿಸಿದ್ದ ಅರ್ಜಿಯ ಮೇರೆಗೆ ಕೇರಳ ಹೈಕೋರ್ಟ್ 'ದಿ ಕೇರಳ ಸ್ಟೋರಿ 2 - ಗೋಸ್ ಬಿಯಾಂಡ್' ಚಿತ್ರದ ನಿರ್ಮಾಪಕರಿಗೆ, ಕೇಂದ್ರ ಚಲನಚಿತ್ರ ಸೆನ್ಸಾರ್ ಮಂಡಳಿಗೆ (ಸಿಬಿಎಫ್ಸಿ ) ಮತ್ತು ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಕಣ್ಣೂರು ಜಿಲ್ಲೆಯ ಕಣ್ಣವಮ್ ಶ್ರೀದೇವ್ ನಂಬೂದಿರಿ ಎಂಬ ಅರ್ಜಿದಾರರು ಫೆಬ್ರುವರಿ 18ರಂದು ಸಲ್ಲಿಸಿದ್ದ ರಿಟ್ ಅರ್ಜಿಯಲ್ಲಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯ, ಸಿಬಿಎಫ್ಸಿ ಮತ್ತು ನಿರ್ಮಾಪಕ ವಿಪುಲ್ ಅಮೃತ್ಲಾಲ್ ಶಾ ಅವರನ್ನು ಪ್ರತಿವಾದಿಗಳನ್ನಾಗಿ ಮಾಡಿದ್ದಾರೆ.
ಗುರುವಾರ ಅರ್ಜಿಯನ್ನು ಪರಿಗಣಿಸಿದ ಹೈಕೋರ್ಟ್ನ ನ್ಯಾಯಮೂರ್ತಿ ಬೆಚು ಕುರಿಯನ್ ಥಾಮಸ್ ಅವರ ಪೀಠವು ಎಲ್ಲಾ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ, ಮುಂದಿನ ವಿಚಾರಣೆಯನ್ನು ಫೆಬ್ರುವರಿ 24ಕ್ಕೆ ಮುಂದೂಡಿದೆ.
‘ದಿ ಕೇರಳ ಸ್ಟೋರಿ 2 - ಗೋಸ್ ಬಿಯಾಂಡ್’ ಎಂಬ ಶೀರ್ಷಿಕೆಯ ಚಿತ್ರಕ್ಕೆ ಸಿಬಿಎಫ್ಸಿ 1952ರ ಸಿನಿಮಾಟೋಗ್ರಾಫ್ ಕಾಯ್ದೆಯಲ್ಲಿರುವ ಶಾಸನಬದ್ಧ ಆದೇಶವನ್ನು ಉಲ್ಲಂಘಿಸಿ ಪ್ರಮಾಣೀಕರಣ ನೀಡಿದ್ದಾರೆ. ಹಾಗಾಗಿ, ನ್ಯಾಯಾಲಯದ ಮೊರೆ ಹೋಗಬೇಕಾಯಿತು ಎಂದು ಅರ್ಜಿದಾರರು ತಿಳಿಸಿದ್ದಾರೆ.
ಫೆಬ್ರುವರಿ 27ರಂದು ಬಿಡುಗಡೆ ನಿರೀಕ್ಷೆ
ಅರ್ಜಿಯ ಪ್ರಕಾರ, ಚಿತ್ರದ ಟೀಸರ್ ಮತ್ತು ಟ್ರೇಲರ್ನಲ್ಲಿ ಬಹು ರಾಜ್ಯಗಳ ಮಹಿಳೆಯರನ್ನು ಒಳಗೊಂಡಿದೆ. ಆದರೆ, ಸಿನಿಮಾಗೆ ‘ಕೇರಳ ಸ್ಟೋರಿ’ ಎಂದು ಶೀರ್ಷಿಕೆ ನೀಡಿ, ಪ್ರಚಾರ ಮಾಡಲಾಗುತ್ತಿದೆ. ಹೀಗೆ ಮಾಡುವುದರಿಂದ ಭಯೋತ್ಪಾದನೆ, ಬಲವಂತದ ಮತಾಂತರ ಮತ್ತು ಜನಸಂಖ್ಯಾ ಪಿತೂರಿಯ ಘಟನೆಗಳನ್ನು ಕೇರಳ ರಾಜ್ಯದೊಂದಿಗೆ ಪ್ರತ್ಯೇಕವಾಗಿ ನೋಡುವಂತಾಗುತ್ತದೆ ಎಂದು ಅರ್ಜಿದಾರರು ಬೇಸರ ವ್ಯಕ್ತಪಡಿಸಿದ್ದಾರೆ.
‘ಒಂದು ರಾಜ್ಯವನ್ನು ಈ ರೀತಿಯಾಗಿ ಚಿತ್ರೀಕರಿಸುವುದು, ಆ ಪ್ರದೇಶದಲ್ಲಿ ವಾಸಿಸುವ ಜನರಿಗೆ ತರುವ ಕಳಂಕವಾಗಿದೆ. ಈ ರೀತಿಯ ಸಿನಿಮಾಗಳಿಂದ ಸಾರ್ವಜನಿಕ ಸುವ್ಯವಸ್ಥೆಯನ್ನು ಭಂಗಗೊಳಿಸುವ, ಕೋಮು ಸಾಮರಸ್ಯ ಪ್ರಚೋದಿಸುವ ಸಾಧ್ಯತೆ ಇರುತ್ತದೆ’ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಪಿಣರಾಯಿ ವಿಜಯನ್ ಆಕ್ರೋಶ
‘ಒಂದು ರಾಜ್ಯವನ್ನು ಈ ರೀತಿಯಾಗಿ ಚಿತ್ರೀಕರಿಸುವುದು ಇಡೀ ಪ್ರಾದೇಶಿಕ ಜನಸಂಖ್ಯೆಗೆ ಕಳಂಕ ತರುವ ಕೃತ್ಯ. ಸಾರ್ವಜನಿಕ ಸುವ್ಯವಸ್ಥೆಯನ್ನು ಭಂಗಗೊಳಿಸುವ, ಕೋಮು ಸಾಮರಸ್ಯ ಪ್ರಚೋದಿಸುವ ಸಾಧ್ಯತೆ ಇರುತ್ತದೆ’ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು ‘ಚಿತ್ರದ ಮೊದಲ ಭಾಗ ಬಿಡುಗಡೆಯಾದಾಗ, ಇದು ಕೋಮುವಾದದ ಕಾರ್ಯಸೂಚಿಯನ್ನು ಹೊಂದಿದೆ ಹಾಗೂ ಸುಳ್ಳನ್ನು ಹರಡುತ್ತಿದೆ ಎಂಬುದು ಗೊತ್ತಾಗಿದೆ. ನಮ್ಮ ಜಾತ್ಯತೀತೆಯನ್ನು ಹಾಳು ಮಾಡಲು ಯೋಜಿಸಿರುವ ಈ ಚಿತ್ರವನ್ನು ಕೇರಳ ಮತ್ತೆ ತಿರಸ್ಕರಿಸುತ್ತದೆ’ ಎಂದು ಬರೆದುಕೊಂಡಿದ್ದಾರೆ.
ಕೋಮು ಸಂಘರ್ಷಕ್ಕೆ ಪ್ರಚೋದನೆ ನೀಡುವ ಉದ್ದೇಶ ಹೊಂದಿರುವ ಚಿತ್ರ ವೀಕ್ಷಣೆಗೆ ಉಚಿತ ಪಾಸ್ಗಳನ್ನು ನೀಡಲಾಗುತ್ತದೆ ಎಂಬುದು ಆಶ್ಚರ್ಯಕರವಾಗಿದೆ. ಸಾಮರಸ್ಯದಿಂದಿರುವ ನಮ್ಮ ಭೂಮಿಯನ್ನು ಭಯೋತ್ಪಾದನೆಯ ಕೇಂದ್ರ ಎಂಬಂತೆ ಬಿಂಬಿಸುವ ಇಂಥ ಪ್ರಯತ್ನಗಳ ವಿರುದ್ಧ ನಾವು ಒಟ್ಟಾಗಿ ನಿಲ್ಲಬೇಕಿದೆ. ಸತ್ಯಕ್ಕೆ ಯಾವಾಗಲೂ ಜಯ ಸಿಗುತ್ತದೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.