ಕೇರಳ ಲಾಟರಿ ತಿರುವೋಣಂ ಬಂಪರ್
(ಚಿತ್ರ ಕೃಪೆ: X/@DDNewsMalayalam)
ಆಲಪ್ಪುಳ: ಕೇರಳ ರಾಜ್ಯದ 'ತಿರುವೋಣಂ ಬಂಪರ್' ಲಾಟರಿಯಲ್ಲಿ ಆಲಪ್ಪುಳ ಜಿಲ್ಲೆಯ ಶರತ್ ನಾಯರ್ ಎಂಬವರು ₹25 ಕೋಟಿ ಬಹುಮಾನ ಗೆದ್ದಿದ್ದಾರೆ.
ಶರತ್ ನಾಯರ್ ಅವರು ಆಲಪ್ಪುಳ ಜಿಲ್ಲೆಯ ಥೈಕಟ್ಟುಶ್ಶೇರಿ ನಿವಾಸಿಯಾಗಿದ್ದಾರೆ. 'TH 577825' ಎಂಬ ಅಂಕಿಯ ಟಿಕೆಟ್ಗೆ ಬಂಪರ್ ಅದೃಷ್ಟ ಒಲಿದು ಬಂದಿದೆ.
ಲತೀಶ್ ಒಡೆತನದ ಲಾಟರಿ ಏಜೆನ್ಸಿಯಿಂದ ಶರತ್ ಟಿಕೆಟ್ ಖರೀಸಿದ್ದರು. ಇದೀಗ ಬಂಪರ್ ಬಹುಮಾನದ ಟಿಕೆಟ್ ಅನ್ನು ತುರಾವೂರ್ನ ಎಸ್ಬಿಐ ಬ್ಯಾಂಕ್ಗೆ ಸಲ್ಲಿಸಿದ್ದಾರೆ.
ಅಕ್ಟೋಬರ್ 3ರಂದು ಫಲಿತಾಂಶ ಹೊರಬಿದ್ದಿತ್ತು. 'ನನಗೆ ಇದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಮನೆಗೆ ಹೋಗಿ ಲಾಟರಿ ಟಿಕೆಟ್ ಪರಿಶೀಲಿಸಿದಾಗ ಬಂಪರ್ ಬಹುಮಾನ ಗೆದ್ದಿರುವ ಬಗ್ಗೆ ಖಚಿತವಾಯಿತು' ಎಂದು ಹೇಳಿದ್ದಾರೆ.
'ನಾನು ವಿರಳವಾಗಿ ಲಾಟರಿ ಟಿಕೆಟ್ಗಳನ್ನು ಖರೀದಿಸುತ್ತೇನೆ. ಬಂಪರ್ ಟಿಕೆಟ್ ಖರೀದಿಸಿದ್ದು ಇದೇ ಮೊದಲು' ಎಂದು ಹೇಳಿದ್ದಾರೆ.
'ಬಹುಮಾನ ಮೊತ್ತದ ಯೋಜನೆಗಳ ಬಗ್ಗೆ ಕೇಳಿದಾಗ, ನಾನು ಏನನ್ನೂ ಯೋಜಿಸಿಲ್ಲ. ಸ್ವಲ್ಪ ಸಾಲಗಳನ್ನು ತೀರಿಸಬೇಕಿದೆ. ಕುಟುಂಬದೊಂದಿಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇನೆ' ಎಂದಿದ್ದಾರೆ.
'ನಾನು ಕಳೆದ 12 ವರ್ಷಗಳಿಂದ ಪೇಂಟ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಅದೇ ಕೆಲಸದಲ್ಲಿ ಮುಂದುವರಿಯುತ್ತೇನೆ' ಎಂದು ಹೇಳಿದ್ದಾರೆ.
ಕೇರಳ ರಾಜ್ಯ ಲಾಟರಿ ಇಲಾಖೆಯ ಅಡಿಯಲ್ಲಿ ಓಣಂ ಹಬ್ಬದ ಪ್ರಯುಕ್ತ ತಿರುವೋಣಂ ಬಂಪರ್ ಲಾಟರಿ ಡ್ರಾ ಏರ್ಪಡಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.