ADVERTISEMENT

Nimisha Priya: ಕೇರಳದ ನರ್ಸ್ ನಿಮಿಷಾ ಪ್ರಿಯಾ ಗಲ್ಲುಶಿಕ್ಷೆ ಮುಂದೂಡಿಕೆ

ಪಿಟಿಐ
Published 15 ಜುಲೈ 2025, 9:17 IST
Last Updated 15 ಜುಲೈ 2025, 9:17 IST
<div class="paragraphs"><p>ನಿಮಿಷಾ ಪ್ರಿಯಾ</p></div>

ನಿಮಿಷಾ ಪ್ರಿಯಾ

   

ನವದೆಹಲಿ: ಕೇರಳದ ನರ್ಸ್‌ ನಿಮಿಷ ಪ್ರಿಯಾ ಅವರಿಗೆ ವಿಧಿಸಲಾಗಿದ್ದ ಗಲ್ಲುಶಿಕ್ಷೆಯ ಜಾರಿಯನ್ನು ಯೆಮೆನ್‌ನ ಅಧಿಕಾರಿಗಳು ಮುಂದೂಡಿದ್ದಾರೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಜುಲೈ 16ರಂದು (ಬುಧವಾರ) ಅವರಿಗೆ ಗಲ್ಲುಶಿಕ್ಷೆ ಜಾರಿಗೊಳಿಸುವುದು ನಿಗದಿಯಾಗಿತ್ತು. 2017ರಲ್ಲಿ ಯೆಮೆನ್‌ನ ನಾಗರಿಕ ತಲಾಲ್‌ ಅಬ್ದೋ ಮಹ್ದಿ ಹತ್ಯೆ ಮಾಡಿದ ಆರೋಪದ ಮೇಲೆ ಕೇರಳದ ಪಾಲಕ್ಕಾಡ್‌ ಜಿಲ್ಲೆಯ ಕೊಲ್ಲಂಗೋಡ್‌ನ ನಿವಾಸಿ ನಿಮಿಷಾ ಪ್ರಿಯಾ ಅವರಿಗೆ ಗಲ್ಲುಶಿಕ್ಷೆ ವಿಧಿಸಲಾಗಿತ್ತು.

ADVERTISEMENT

ನಿಮಿಷಾ ಪ್ರಿಯಾ ಗಲ್ಲು ಶಿಕ್ಷೆ ಮುಂದೂಡಿಕೆ ಬಗ್ಗೆ ಅಧಿಕೃತ ಪ್ರಕಟಣೆ

ಕೇರಳದ ಪಾಲಕ್ಕಾಡ್‌ ಜಿಲ್ಲೆಯ ನಿಮಿಷಾ ಅವರು ತನ್ನ ಕ್ಲಿನಿಕ್‌ ಪಾಲುದಾರನಾಗಿದ್ದ ಯೆಮೆನ್‌ ದೇಶದ ಪ್ರಜೆ ತಲಾಲ್‌ ಅಬ್ದು ಮಹ್ದಿ ಎಂಬವರನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದಾರೆ. 2017ರಲ್ಲಿ ಕೊಲೆ ಪ್ರಕರಣ ನಡೆದಿತ್ತು.

ಯೆಮೆನ್‌ನ ವಿಚಾರಣಾ ನ್ಯಾಯಾಲಯ 2020ರಲ್ಲಿ ನಿಮಿಷಾ ಅವರಿಗೆ ಗಲ್ಲು ಶಿಕ್ಷೆ ವಿಧಿಸಿ ಆದೇಶಿಸಿತ್ತು. ಯೆಮೆನ್‌ನ ‘ಸುಪ್ರೀಂ ಜುಡಿಷಿಯಲ್ ಕೌನ್ಸಿಲ್’ 2023ರ ನವೆಂಬರ್‌ನಲ್ಲಿ ಈ ಶಿಕ್ಷೆ ಎತ್ತಿ ಹಿಡಿದಿತ್ತು.

‘ಯೆಮೆನ್‌ನ ಸ್ಥಳೀಯ ಅಧಿಕಾರಿಗಳು ಜುಲೈ 16ರಂದು ನಿಗದಿಯಾಗಿದ್ದ ಗಲ್ಲುಶಿಕ್ಷೆ ಜಾರಿಯನ್ನು ಮುಂದೂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ಮುಸ್ಲಿಯಾರ್ ಮಧ್ಯಪ್ರವೇಶ:
ಶಿಕ್ಷೆಯಿಂದ ಪಾರು ಮಾಡುವ ನಿಟ್ಟಿನಲ್ಲಿ ಕೇರಳದ ಪ್ರಭಾವಿ ಸುನ್ನಿ ಮುಸ್ಲಿಂ ಧಾರ್ಮಿಕ ಮುಖಂಡ ಕಾಂತಪುರಂ ಎ.ಪಿ. ಅಬೂಬಕ್ಕರ್‌ ಮುಸ್ಲಿಯಾರ್‌ ಮಧ್ಯಪ್ರವೇಶಿಸಿದ್ದರು. ‌ 94 ವರ್ಷದ ಶೇಕ್‌ ಅಬೂಬಕ್ಕರ್ ಅವರು ಯೆಮೆನ್‌ನಲ್ಲಿರುವ ಧಾರ್ಮಿಕ ಮುಖಂಡ, ಶೇಕ್‌ ಹಬೀರ್‌ ಉಮರ್‌ ನೇತೃತ್ವದಲ್ಲಿ ಸಭೆ ನಡೆಸಿದ್ದು, ಇದರಲ್ಲಿ ಮಹ್ದಿ ಕುಟುಂಬದ ಸದಸ್ಯರು ಭಾಗವಹಿಸಿದ್ದರು.
ನಿರಂತರ ಪ್ರಯತ್ನ:
ಪ್ರಿಯಾ ಕುಟುಂಬದ ಸದಸ್ಯರು ಹಾಗೂ ಸಂತ್ರಸ್ತರ ಕುಟುಂಬದ ಜೊತೆಗೆ ‘ಪರಸ್ಪರ ಒಪ್ಪುವ ಪರಿಹಾರ’ ಹುಡುಕುವ ನಿಟ್ಟಿನಲ್ಲಿ ಭಾರತ ಸರ್ಕಾರವು ಇತ್ತೀಚಿನ ದಿನಗಳಲ್ಲಿ ನಿರಂತರ ಪ್ರಯತ್ನಗಳನ್ನು ನಡೆಸಿತ್ತು. ಪ್ರಕರಣದ ಆರಂಭದಿಂದಲೂ ಭಾರತ ಸರ್ಕಾರವು ಸಾಧ್ಯವಿರುವ ಎಲ್ಲ ರೀತಿಯ ನೆರವುಗಳನ್ನು ಒದಗಿಸುತ್ತಿದೆ. ಸೂಕ್ಷ್ಮ ಪ್ರಕರಣವಾಗಿದ್ದರೂ ಕೂಡ, ಜೈಲಿನ ಅಧಿಕಾರಿಗಳು ಹಾಗೂ ಪ್ರಾಸಿಕ್ಯೂಟರ್‌ ಕಚೇರಿಯ ಜೊತೆಗೆ ನಿರಂತರ ಸಂಪರ್ಕ ಸಾಧಿಸಿ, ಗಲ್ಲುಶಿಕ್ಷೆಯನ್ನು ಮುಂದೂಡುವಂತೆ ಒತ್ತಾಯಿಸಿದ್ದರು.

ನಿಮಿಷಾ ಮಾಡಿದ ತಪ್ಪನ್ನು ಕ್ಷಮಿಸುವುದಕ್ಕಾಗಿ ಸಂತ್ರಸ್ತರು ಅಥವಾ ಅವರ ಕುಟುಂಬದವರಿಗೆ ಪ್ರಕರಣದ ಆರೋಪಿಗಳು ಪರಿಹಾರದ ರೂಪದಲ್ಲಿ ನೀಡುವ ಮೊತ್ತ ‘ಬ್ಲಡ್‌ ಮನಿ’ ನೀಡುವ ಕುರಿತು ಭಾರತದ ಕಡೆಯಿಂದ ಮಾತುಕತೆಗಳು ನಡೆದಿವೆ ಎಂದು ಮೂಲಗಳು ತಿಳಿಸಿವೆ.


38 ವರ್ಷದ ನಿಮಿಷಾ ಸದ್ಯ ಯೆಮೆನ್‌ನ ರಾಜಧಾನಿ ಸನಾ ಜೈಲಿನಲ್ಲಿ ಬಂಧಿಯಾಗಿದ್ದಾರೆ. ಈ ನಗರವು ಇರಾನ್‌ ಬೆಂಬಲಿತ ಹುಥಿ ಬಂಡುಕೋರರ ಹಿಡಿತದಲ್ಲಿದೆ.

ಗಲ್ಲುಶಿಕ್ಷೆ ಮುಂದೂಡಿಕೆಯಾಗಿರುವುದು ಸಂತಸ ಹಾಗೂ ಸಮಾಧಾನ ತಂದಿದೆ. ಶಿಕ್ಷೆ ತಡೆದು ಸುರಕ್ಷಿತವಾಗಿ ಭಾರತಕ್ಕೆ ಮರಳಿ ತರುವ ನಿಟ್ಟಿನಲ್ಲಿ ಎಲ್ಲ ಪ್ರಯತ್ನಗಳು ಮುಂದುವರಿಯಲಿವೆ
ಟಾಮಿ ಥೋಮಸ್‌ ನಿಮಿಷಾ ಪ್ರಿಯಾ ಪತಿ
ಕುಟುಂಬಸ್ಥರ ಸಂತಸ
ನಿಮಿಷಾ ಪ್ರಿಯಾ ಗಲ್ಲುಶಿಕ್ಷೆ ಜಾರಿ ಮುಂದೂಡಿಕೆಯಾಗಿರುವುದು ಕೇರಳದಲ್ಲಿರುವ ಅವರ ಕುಟುಂಬಸ್ಥರಿಗೆ ಸಂತಸ ತಂದಿದೆ. ರಾಜ್ಯದ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಧಾರ್ಮಿಕ ನಾಯಕರು ಕೂಡ ಸಂತಸ ವ್ಯಕ್ತಪಡಿಸಿದ್ದಾರೆ. ‘ನಿಮಿಷಾಳ ಗಲ್ಲುಶಿಕ್ಷೆ ಮುಂದೂಡಿಕೆಯಾಗಲು ಶ್ರಮಿಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸುತ್ತೇನೆ’ ಎಂದು ಆಕೆಯ ಪತಿ ಟಾಮಿ ಥೋಮಸ್‌ ತಿಳಿಸಿದ್ದಾರೆ. ‘ಪ್ರಿಯಾಳ ತಾಯಿ ಅವರೇ ಗಲ್ಲುಶಿಕ್ಷೆ ಮುಂದೂಡಿಕೆಯಾಗಿರುವುದನ್ನು ತಿಳಿಸಿದರು. ಶಿಕ್ಷೆಯಿಂದ ಪಾರಾಗುವ ನಿಟ್ಟಿನಲ್ಲಿ ನಿರಂತರ ಹೋರಾಟ ಮುಂದುವರಿಯಲಿದೆ’ ಎಂದು ಹೇಳಿದ್ದಾರೆ. ‘ಗಲ್ಲುಶಿಕ್ಷೆ ಮುಂದೂಡಿಕೆಯಾಗಿರುವುದು ಸಮಾಧಾನ ಹಾಗೂ ಭರವಸೆಗಳನ್ನು ಹುಟ್ಟುಹಾಕಿದೆ’ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ತಿಳಿಸಿದ್ದಾರೆ. ‘ಸಹಾನುಭೂತಿ ಹೊಂದಿದ ಸಹೃದಯ ವ್ಯಕ್ತಿಗಳು ಈ ನಿಟ್ಟಿನಲ್ಲಿ ನಿರಂತರ ಕೆಲಸ ಮಾಡಿದ್ದಾರೆ. ನಿಮಿಷಾ ಅವರಿಗೆ ನ್ಯಾಯ ಒದಗಿಸಲು ಕಾಂತಪುರಂ ಎ.ಪಿ. ಅಬೂಬಕ್ಕರ್‌ ಮುಸ್ಲಿಯಾರ್‌ ಕೂಡ ನಿರಂತರ ಶ್ರಮಿಸಿದ್ದು ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.