ತಿರುವನಂತಪುರ: ರಾಜ್ಯದಲ್ಲಿ ವರದಕ್ಷಿಣೆ ಕಿರುಕುಳದ ಪ್ರಕರಣಗಳು ಹೆಚ್ಚುತ್ತಿರುವ ಆತಂಕದ ನಡುವೆ, ಈ ದೌರ್ಜನ್ಯದಿಂದ ಸಂಕಷ್ಟಕ್ಕೊಳಗಾಗಿರುವ ಮಹಿಳೆಯರಿಗೆ ನೆರವು ನೀಡುವ ಸಲುವಾಗಿ ವಿಧಾನಸಭೆ ವಿರೋಧಪಕ್ಷದ ನಾಯಕ ವಿ.ಡಿ.ಸತೀಶನ್ ಅವರು, ತಮ್ಮ ಕಚೇರಿಯಲ್ಲಿ ‘ವರದಕ್ಷಿಣೆ ವಿರೋಧಿ ಸಹಾಯ ಕೇಂದ್ರ‘ವನ್ನು ಆರಂಭಿಸಿದ್ದಾರೆ.
ವರದಕ್ಷಿಣೆಗಾಗಿ ಮಾನಸಿಕ ಮತ್ತು ದೈಹಿಕವಾಗಿ ನೊಂದ ಮಹಿಳೆಯರು ಕೇಂದ್ರವನ್ನು ಸಂಪರ್ಕಿಸಲು ಶುಲ್ಕ ರಹಿತ ದೂರವಾಣಿ ಸಂಖ್ಯೆ ನೀಡಲಾಗಿದೆ. ಈ ದೂರವಾಣಿ ಸಂಖ್ಯೆ ಮೂಲಕ ಕೇಂದ್ರವನ್ನು ಸಂಪರ್ಕಿಸಿ, ಉಚಿತವಾಗಿ ಕಾನೂನು ನೆರವು ಪಡೆಯಬಹುದು.
ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಮತ್ತು ಖ್ಯಾತ ಹಿನ್ನೆಲೆ ಗಾಯಕಿ ಅಪರ್ಣಾ ರಾಜೀವ್ ಅವರು ಜಂಟಿಯಾಗಿ ‘ವರದಕ್ಷಿಣೆ ವಿರೋಧಿ ಸಹಾಯ ಕೇಂದ್ರ‘ವನ್ನು ಉದ್ಘಾಟಿಸಿದರು.
ಉದ್ಘಾಟನೆ ನಂತರ ಮಾತನಾಡಿದ ಸತೀಶನ್, ‘ಸಂತ್ರಸ್ತ ಮಹಿಳೆಯರಿಗೆ ಕಾನೂನು ನೆರವು ನೀಡುವ ಸಲುವಾಗಿ 87 ವಕೀಲರನ್ನು ನಿಯೋಜಿಸಲಾಗಿದೆ’ ಎಂದು ತಿಳಿಸಿದರು.
ಇದೇ ರೀತಿಯ ಸಹಾಯ ಕೇಂದ್ರಗಳನ್ನು ತೆರೆಯುವಂತೆ ಅವರು ವಿವಿಧ ಸಂಘ–ಸಂಸ್ಥೆಗಳಿಗೆ ಒತ್ತಾಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.