
ಮಮತಾ ಬ್ಯಾನರ್ಜಿ
ಪಿಟಿಐ ಚಿತ್ರ
ನವದೆಹಲಿ: ಕೇರಳದ ಹೆಸರನ್ನು 'ಕೇರಳಂ' ಎಂದು ಬದಲಿಸುವ ನಿರ್ಣಯಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಆದರೆ ಪಶ್ಚಿಮ ಬಂಗಾಳದ ಅಧಿಕೃತ ಹೆಸರನ್ನು 'ಬಂಗಾಳ' ಎಂದು ಬದಲಿಸುವಂತೆ ಕೇಂದ್ರವನ್ನು ಎಷ್ಟೇ ಮನವಿ ಮಾಡಿದರೂ ಪರಿಗಣಿಸುತ್ತಿಲ್ಲ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
ಪಶ್ಚಿಮ ಬಂಗಾಳವನ್ನು ಮರು ನಾಮಕರಣ ಮಾಡುವ ನಿರ್ಣಯವನ್ನು ಕೇಂದ್ರ ಸರ್ಕಾರವು ಎಂದಿಗೂ ಪರಿಗಣಿಸಿಲ್ಲ ಎಂದು ಅವರು ದೂರಿದ್ದಾರೆ.
ಕೇರಳದ ಹೆಸರನ್ನು ಅಧಿಕೃತವಾಗಿ 'ಕೇರಳಂ' ಎಂದು ಬದಲಾಯಿಸುವಂತೆ ಕೇಂದ್ರವನ್ನು ಒತ್ತಾಯಿಸುವ ನಿರ್ಣಯವನ್ನು ಕೇರಳ ವಿಧಾನಸಭೆಯು 2023ರ ಆಗಸ್ಟ್ 9ರಂದು ಅಂಗೀಕರಿಸಿತ್ತು. ಅದಕ್ಕೀಗ ಕೇಂದ್ರದ ಅನುಮೋದನೆ ಸಿಕ್ಕಿದೆ.
'ಬಿಜೆಪಿ ಹಾಗೂ ಸಿಪಿಐ(ಎಂ) ನಡುವಣ ಮೈತ್ರಿಯಿಂದಾಗಿ ಕೇರಳಕ್ಕೆ ಹೊಸ ಹೆಸರು ಪಡೆಯಲು ಸಹಾಯವಾಗಿದೆ' ಎಂದು ಮಮತಾ ಆರೋಪಿಸಿದ್ದಾರೆ.
'ಪಶ್ಚಿಮ ಬಂಗಾಳವನ್ನು ಯಾವತ್ತೂ ಕಡೆಗಣಿಸಲಾಗುತ್ತಿದೆ. ಆದರೆ ಮುಂದೊಂದು ದಿನ ಬಿಜೆಪಿ ಅಧಿಕಾರಿದಲ್ಲಿರುವುದಿಲ್ಲ. ಆಗ ನಾವು ಹೆಸರನ್ನು ಬದಲಾಯಿಸಿಕೊಳ್ಳುತ್ತೇವೆ' ಎಂದಿದ್ದಾರೆ.
ಈ ಸಂದರ್ಭದಲ್ಲಿ ಕೇರಳಂ ಎಂಬ ಹೊಸ ಹೆಸರು ಪಡೆದಿರುವುದಕ್ಕೆ ಕೇರಳದ ಜನರಿಗೆ ಮಮತಾ ಬ್ಯಾನರ್ಜಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಪಶ್ಚಿಮ ಬಂಗಾಳದ ಹೆಸರನ್ನು ಅಧಿಕೃತವಾಗಿ ಬಂಗಾಳ ಎಂದು ಬದಲಾಯಿಸುವಂತೆ ಕೇಂದ್ರವನ್ನು ಹಲವು ಬಾರಿ ಒತ್ತಾಯಿಸಲಾಗಿದೆ. ಈ ಸಂಬಂಧ ವಿಧಾನಸಭೆಯಲ್ಲಿ ನಿರ್ಣಯವನ್ನು ಅಂಗೀಕರಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.