ADVERTISEMENT

ಪಿಣರಾಯಿ ಆಡಳಿತದಲ್ಲಿ ಕಾನೂನುಬಾಹಿರ ಚಟುವಟಿಕೆಗಳ ತಾಣವಾಗುತ್ತಿರುವ ಕೇರಳ: ನಡ್ಡಾ

ಪಿಟಿಐ
Published 19 ಡಿಸೆಂಬರ್ 2021, 10:37 IST
Last Updated 19 ಡಿಸೆಂಬರ್ 2021, 10:37 IST
ಜೆ.ಪಿ.ನಡ್ಡಾ - ಪಿಟಿಐ ಚಿತ್ರ
ಜೆ.ಪಿ.ನಡ್ಡಾ - ಪಿಟಿಐ ಚಿತ್ರ   

ನವದೆಹಲಿ: ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಆಡಳಿತದಲ್ಲಿ ಕೇರಳವು ಕಾನೂನುಬಾಹಿರ ಚಟುವಟಿಕೆಗಳ ರಾಜ್ಯವಾಗಿ ಬದಲಾಗುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಟೀಕಿಸಿದ್ದಾರೆ.

ಕೇರಳದ ಆಲಪ್ಪುಳದಲ್ಲಿ ಪಕ್ಷದ ಓಬಿಸಿ ಮೋರ್ಚಾದ ರಾಜ್ಯ ಕಾರ್ಯದರ್ಶಿ ರಂಜಿತ್ ಶ್ರೀನಿವಾಸನ್ ಅವರನ್ನು ಭಾನುವಾರ ಬೆಳಿಗ್ಗೆ ಹತ್ಯೆ ಮಾಡಲಾಗಿದೆ. ಇದನ್ನು ನಡ್ಡಾ ಖಂಡಿಸಿದ್ದಾರೆ.

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಮತ್ತು ಬಿಜೆಪಿಯು ಆಲಪ್ಪುಳದಲ್ಲಿ ರಾಜಕೀಯ ಘರ್ಷಣೆಗಿಳಿದಿದ್ದು, ಎರಡೂ ಕಡೆಯ ಇಬ್ಬರು ನಾಯಕರು ಹತ್ಯೆಯಾಗಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ನಿಷೇಧಾಜ್ಞೆ ಹೇರಲಾಗಿದೆ.

ADVERTISEMENT

‘ಪಕ್ಷದ ಒಬಿಸಿ ಮೋರ್ಚಾದ ರಾಜ್ಯ ಕಾರ್ಯದರ್ಶಿ ರಂಜಿತ್ ಶ್ರೀನಿವಾಸನ್ ಅವರನ್ನು ಮೂಲಭೂತವಾದಿಗಳು ಹತ್ಯೆ ಮಾಡಿರುವುದು ಖಂಡನೀಯ. ಇಂಥ ಹೇಡಿ ಕೃತ್ಯಗಳನ್ನು ಸಹಿಸಲಾಗದು. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆಡಳಿತದಲ್ಲಿ ಕೇರಳವು ಕಾನೂನುಬಾಹಿರ ಚಟುವಟಿಕೆಗಳ ತಾಣವಾಗಿ ಬದಲಾಗುತ್ತಿದೆ. ಕ್ರೌರ್ಯದ ಮೂಲಕ ನಮ್ಮನ್ನು ಬೆದರಿಸುವುದು ಅವರಿಂದ ಸಾಧ್ಯವಿಲ್ಲ’ ಎಂದು ನಡ್ಡಾ ಟ್ವೀಟ್ ಮಾಡಿದ್ದಾರೆ.

ಪಿಣರಾಯಿ ವಿಜಯನ್ ಕೂಡ ಘಟನೆಯನ್ನು ಖಂಡಿಸಿದ್ದು, ಆರೋಪಿಗಳು ಮತ್ತು ಅವರಿಗೆ ಕುಮ್ಮಕ್ಕು ನೀಡಿದವರನ್ನು ಪೊಲೀಸರು ಬಂಧಿಸಿ, ಅವರ ವಿರುದ್ಧ ಕ್ರಮ ಕೈಗೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.