ADVERTISEMENT

 ಮಸೂದೆಗಳಿಗೆ ಸುಲಭವಾಗಿ ಅನುಮೋದನೆ ಪಡೆಯಲು ವಿರೋಧ ಪಕ್ಷಗಳ ಸದಸ್ಯರ ಅಮಾನತು: ಖರ್ಗೆ

ಐಎಎನ್ಎಸ್
Published 22 ಡಿಸೆಂಬರ್ 2021, 9:42 IST
Last Updated 22 ಡಿಸೆಂಬರ್ 2021, 9:42 IST
ಮಲ್ಲಿಕಾರ್ಜುನ ಖರ್ಗೆ: ರಾಜ್ಯಸಭೆಯ ವಿರೋಧ ಪಕ್ಷದ ನಾಯಕ - ಪಿಟಿಐ ಚಿತ್ರ
ಮಲ್ಲಿಕಾರ್ಜುನ ಖರ್ಗೆ: ರಾಜ್ಯಸಭೆಯ ವಿರೋಧ ಪಕ್ಷದ ನಾಯಕ - ಪಿಟಿಐ ಚಿತ್ರ    

ನವದೆಹಲಿ: ತರಾತುರಿಯಲ್ಲಿ ಮಸೂದೆಗಳಿಗೆ ಅನುಮೋದನೆ ಪಡೆಯಲು ಉದ್ದೇಶ ಪೂರ್ವಕವಾಗಿಯೇ ವಿರೋಧ ಪಕ್ಷಗಳ ರಾಜ್ಯಸಭಾ ಸದಸ್ಯರನ್ನುಅಮಾನತು ಮಾಡಲಾಗಿದೆ ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.

‘ಸರ್ಕಾರವು ಮಸೂದೆಗಳಿಗೆ ಸುಲಭವಾಗಿ ಅನುಮೋದನೆ ಪಡೆಯಲು ಉದ್ದೇಶಿಸಿದೆ. ಹೀಗಾಗಿಯೇ, ಉದ್ದೇಶ ಪೂರ್ವಕವಾಗಿ ವಿರೋಧ ಪಕ್ಷಗಳ12 ಮಂದಿ ರಾಜ್ಯಸಭಾ ಸದಸ್ಯರನ್ನು ಅಮಾನತು ಮಾಡಲಾಗಿದೆ. ಸುಗಮ ಕಲಾಪದ ದೃಷ್ಟಿಯಿಂದ ಅಮಾನತು ಆದೇಶವನ್ನು ಹಿಂಪಡೆಯುವಂತೆ ಹಲವು ಬಾರಿ ಮನವಿ ಮಾಡಿದ್ದೇವೆ. ಆದರೂ ಏನೂ ಪ್ರಯೋಜನವಾಗಿಲ್ಲ’ ಎಂದು ಖರ್ಗೆ ಹೇಳಿದ್ದಾರೆ.

ಮಂಗಳವಾರ ತೃಣಮೂಲ ಕಾಂಗ್ರೆಸ್‌ನ ರಾಜ್ಯಸಭಾ ಸದಸ್ಯ ಡೆರೆಕ್ ಓಬ್ರಿಯಾನ್ ಅವರನ್ನು ಅಮಾನತು ಮಾಡಲಾಗಿದ್ದು, ಈ ಮೂಲಕ ಅಮಾನತಾದ ವಿರೋಧ ಪಕ್ಷಗಳ ರಾಜ್ಯಸಭಾ ಸದಸ್ಯರ ಸಂಖ್ಯೆ 13ಕ್ಕೆ ಏರಿದೆ. ಅವರೂ ಸಹ ಇಂದು ಪ್ರತಿಭಟನಾನಿರತ ಅಮಾನತುಗೊಂಡಿರುವ ರಾಜ್ಯಸಭಾ ಸದಸ್ಯರನ್ನು ಸೇರಿಕೊಂಡಿದ್ದಾರೆ.

ಚುನಾವಣಾ ಸುಧಾರಣಾ ಮಸೂದೆ ಮಂಡನೆ ವೇಳೆ ನಿಯಮದ ಪುಸ್ತಕವನ್ನು ಎಸೆದ ಆರೋಪದಲ್ಲಿ ಅವರನ್ನು ಅಮಾನತು ಮಾಡಲಾಗಿದೆ. ಸಂಸದೀಯ ವ್ಯವಹಾರಗಳ ಖಾತೆಯ ರಾಜ್ಯ ಸಚಿವ ವಿ. ಮುರಳಿಧರನ್ ಅವರು ಡೆರೆಕ್ ಅವರ ಅಮಾನತು ನಿರ್ಣಯವನ್ನು ಮಂಡಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.