ADVERTISEMENT

ನೆಹರು ಸೊಸೈಟಿ ಸದಸ್ಯತ್ವದಿಂದ ಕೈಬಿಟ್ಟದ್ದಕ್ಕೆ ಕೇಂದ್ರದ ವಿರುದ್ಧ ಖರ್ಗೆ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2019, 13:15 IST
Last Updated 6 ನವೆಂಬರ್ 2019, 13:15 IST
ಮಲ್ಲಿಕಾರ್ಜುನ್‌ ಖರ್ಗೆ
ಮಲ್ಲಿಕಾರ್ಜುನ್‌ ಖರ್ಗೆ   

ನವದೆಹಲಿ: ನೆಹರು ಸ್ಮಾರಕ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯ (ಎನ್‌ಎಂಎಂಎಲ್) ಸೊಸೈಟಿ ಸದಸ್ಯತ್ವದಿಂದ ತಮ್ಮ ಹೆಸರನ್ನು ಕೈಬಿಟ್ಟಿರುವ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸರ್ಕಾರದ ಅಧೀನದಲ್ಲಿರುವ ಎನ್‌ಎಂಎಂಎಲ್‌ ಸೊಸೈಟಿಗೆ ಅಧ್ಯಕ್ಷರಾಗಿ ಪ್ರಧಾನಿ ಮೋದಿ ಮತ್ತು ಉಪಾಧ್ಯಕ್ಷರಾಗಿ ರಕ್ಷಣಾ ಸಚಿವ ರಾಜನಾಥ ಸಿಂಗ್‌ರನ್ನು ನೇಮಿಸಲಾಗಿದೆ. ಆ ಮೂಲಕ ಈ ಹಿಂದೆ ಸೊಸೈಟಿಯ ಸದಸ್ಯರಾಗಿದ್ದ ಕಾಂಗ್ರೆಸ್‌ ಹಿರಿಯ ನಾಯಕರಾದ ಮಲ್ಲಿಕಾರ್ಜುನ್‌ ಖರ್ಗೆ, ಜೈರಾಮ್‌ ರಮೇಶ್‌ ಮತ್ತು ಕರಣ್‌ ಸಿಂಗ್‌ ಅವರ ಹೆಸರನ್ನು ಕೈಬಿಟ್ಟಿದೆ.

ಈ ವಿಚಾರವಾಗಿ ಎಎನ್‌ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿರುವ ಖರ್ಗೆ ಅವರು ’ಸರ್ಕಾರದ ಈ ನಿರ್ಧಾರದಿಂದ ತಮಗೆ ನಿರಾಸೆಯಾಗಿದ್ದು, ಕೇಂದ್ರವು ಎಲ್ಲವನ್ನೂ ರಾಜಕೀಯವಾಗಿಯೇ ಪರಿಗಣಿಸುತ್ತಿರುವುದು ದುರದೃಷ್ಟಕರ. ತಮಗೆ ಬೇಕಾದವರನ್ನೇ ಸೊಸೈಟಿ ಸದಸ್ಯರನ್ನಾಗಿ ನೇಮಿಸುವ ಉದ್ದೇಶದಿಂದ ಸರ್ಕಾರವು ಇಂತಹ ನಿರ್ಧಾರ ತೆಗೆದುಕೊಂಡಿದೆ,’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸಚಿವರಾದ ಅಮಿತ್‌ ಶಾ, ನಿರ್ಮಲಾ ಸೀತಾರಾಮನ್, ರಮೇಶ್‌ ಪೊಕ್ರಿಯಾಲ್‌, ಪ್ರಕಾಶ್‌ ಜಾವ್ಡೆಕರ್‌, ವಿ ಮುರಳೀದರನ್‌ ಮತ್ತು ಪ್ರಲ್ಹಾದ್‌ ಸಿಂಗ್‌ ಪಟೇಲ್‌ ಸೇರಿದಂತೆ ಐಸಿಸಿಆರ್‌ ಅಧ್ಯಕ್ಷ ವಿನಯ್‌ ಸಹಸ್ರಬುದ್ಹೆ, ಪ್ರಸಾರ ಭಾರತಿ ಅಧ್ಯಕ್ಷ ಎ ಸೂರ್ಯಪ್ರಕಾಶ್‌ ಅವರು ಸೊಸೈಟಿಯ ಸದಸ್ಯರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.