ನವದೆಹಲಿ: ರಾಹುಲ್ ಗಾಂಧಿ ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬಿಜೆಪಿ ಹೇಳಿದೆ.
ಅರುಣಾಚಲ ಪ್ರದೇಶದಲ್ಲಿ ಭಾರತೀಯ ಸೇನೆಯ ಮೇಲೆ ಚೀನಾದ ಸೈನಿಕರು ಹಲ್ಲೆ ಮಾಡಿದ್ದಾರೆ ಎಂಬ ರಾಹುಲ್ ಹೇಳಿಕೆಯನ್ನು ಬಿಜೆಪಿ ವಕ್ತಾರ ಗೌರವ್ ಭಾಟಿಯಾ ಖಂಡಿಸಿದ್ದಾರೆ.
ಚೀನಾ ವಿಷಯಕ್ಕೆ ಸಂಬಂಧಿಸಿದಂತೆ ವಿಪಕ್ಷಗಳು ದೇಶದ ಪರವಾಗಿದ್ದರೆ ಯೋಧರ ನೈತಿಕ ಸ್ಥೈರ್ಯ ಕುಗ್ಗಿಸುವ ಯತ್ನ ಮಾಡಿರುವ ರಾಹುಲ್ ಗಾಂಧಿ ಅವರನ್ನು ಪಕ್ಷದಿಂದ ಹೊರಹಾಕಬೇಕು ಎಂದು ಬೇಡಿಕೆ ಇರಿಸಿದರು.
ರಾಹುಲ್ ಅವರನ್ನು ಕನೌಜ್ ರಾಜ ಜೈಚಂದ್ ಅವರೊಂದಿಗೆ ಹೋಲಿಸಿರುವ ಬಿಜೆಪಿ ಮುಖಂಡ, ಯೋಧರ ಮನೋಸ್ಥೈರ್ಯ ಕುಗ್ಗಿಸಲು ರಾಹುಲ್ ನಿರಂತರವಾಗಿ ಹೇಳಿಕೆ ನೀಡುತ್ತಿದ್ದಾರೆ. ರಾಹುಲ್ ತಮ್ಮ ಹೇಳಿಕೆಗಾಗಿ ಕ್ಷಮೆಯಾಚಿಸಬೇಕು ಎಂದು ಹೇಳಿದರು.
ಪಾಕಿಸ್ತಾನದ ಮೇಲೆ ದಾಳಿ ನಡೆದಾಗಲೂ ಪುರಾವೆ ಕೇಳಿದ್ದ ರಾಹುಲ್, ಪ್ರಧಾನಿಯನ್ನು 'ಸರೆಂಡರ್ ಮೋದಿ' ಎಂದು ಕರೆದಿದ್ದರು ಎಂದು ಭಾಟಿಯಾ ದೂರಿದರು.
ಚೀನಾ ಯುದ್ಧಕ್ಕೆ ಸಿದ್ದತೆ ನಡೆಸುತ್ತಿದೆ. ಆದರೆ ಕೇಂದ್ರ ಸರ್ಕಾರವು ಚೀನಾ ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಭಾರತ್ ಜೋಡೊ ಯಾತ್ರೆ ವೇಳೆ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.