ADVERTISEMENT

ಲೋಕಪಾಲ್‌ ಸಭೆ ಬಹಿಷ್ಕರಿಸಿ ಮೋದಿಗೆ ಖರ್ಗೆ ಪತ್ರ

ಪಿಟಿಐ
Published 19 ಜುಲೈ 2018, 15:41 IST
Last Updated 19 ಜುಲೈ 2018, 15:41 IST
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ   

ನವದೆಹಲಿ: ಲೋಕಪಾಲ್‌ ಆಯ್ಕೆ ಸಮಿತಿ ಸಭೆ ಬಹಿಷ್ಕರಿಸಿರುವುದಾಗಿ ಲೋಕಸಭೆಯಲ್ಲಿನ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

‘ಲೋಕಪಾಲ್‌ ಕಾಯ್ದೆ 2013ರಲ್ಲಿ ಲೋಕಸಭೆಯಲ್ಲಿನ ಅತಿ ದೊಡ್ಡ ವಿರೋಧ ಪಕ್ಷದ ನಾಯಕನಿಗೆ ಲೋಕಪಾಲ್‌ ಆಯ್ಕೆ ಸಮಿತಿಯಲ್ಲಿ ಪೂರ್ಣ ಪ್ರಮಾಣದ ಸದಸ್ಯತ್ವದ ಸ್ಥಾನಮಾನ ನೀಡಬೇಕೆನ್ನುವುದು ಇದೆ. ಈ ಸ್ಥಾನಮಾನ ನೀಡುವವರೆಗೂ ಆಯ್ಕೆ ಸಮಿತಿ ಸಭೆಯಲ್ಲಿ ಭಾಗವಹಿಸುವುದಿಲ್ಲ ಎನ್ನುವುದನ್ನು ನಾನು ಮತ್ತೊಮ್ಮೆ ನಿಮಗೆ ಗೌರವಯುತವಾಗಿ ತಿಳಿಸುತ್ತಿದ್ದೇನೆ’ ಎಂದು ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.

ಸಭೆಗೆ ‘ವಿಶೇಷ ಆಹ್ವಾನಿತರು’ ಎಂದು ಆಹ್ವಾನ ನೀಡಿರುವುದಕ್ಕೆ ಮಲ್ಲಿಕಾರ್ಜುನ ಖರ್ಗೆ ಪತ್ರದಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಾಯ್ದೆಯ ಸೆಕ್ಷನ್‌ 4ರಲ್ಲಿ ಇದಕ್ಕೆ ಅಂತಹ ಯಾವುದೇ ನಿಬಂಧನೆಗಳು ಇಲ್ಲ ಸರ್ಕಾರಕ್ಕೂ ಚೆನ್ನಾಗಿ ಗೊತ್ತಿರಬೇಕಲ್ಲ ಎಂದು ಎನ್‌ಡಿಎ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ADVERTISEMENT

‘ನಿಮ್ಮ ಸರ್ಕಾರ ಅಧಿಕಾರಕ್ಕೆ ಬಂದು ಇಲ್ಲಿಗೆ ನಾಲ್ಕು ವರ್ಷಗಳಾಗಿವೆ. ಈ ನೇಮಕ ಪ್ರಕ್ರಿಯೆಯಲ್ಲಿ ವಿರೋಧ ಪಕ್ಷಗಳ ಧ್ವನಿಯನ್ನು ಪರಿಗಣಿಸಬೇಕೆನ್ನುವುದು ಸರ್ಕಾರಕ್ಕೂ ಪ್ರಾಮಾಣಿಕವಾಗಿ ಅನಿಸಿದ್ದರೆ, ಇದಕ್ಕಾಗಿ ಈಗಾಗಲೇ ಅಗತ್ಯ ತಿದ್ದುಪಡಿ ತರಬೇಕಿತ್ತು’ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಇದೇ ವಿಷಯ ಮುಂದಿಟ್ಟುಕೊಂಡು ಖರ್ಗೆಯವರು ಈ ಹಿಂದೆಯೂ ಲೋಕಪಾಲ್‌ ಆಯ್ಕೆ ಸಮಿತಿ ಸಭೆ ಬಹಿಷ್ಕರಿಸಿದ್ದರು. ಈ ಹಿಂದೆ ಬರೆದಿದ್ದ ಪತ್ರಗಳ ವಿಚಾರಗಳ ಬಗ್ಗೆಯೂ ಅವರು ಪ್ರಧಾನಿಗೆ ನೆನಪು ಮಾಡಿಕೊಟ್ಟಿದ್ದಾರೆ. ಲೋಕಪಾಲ್‌ ಆಯ್ಕೆ ಸಮಿತಿ ಸಭೆ ಗುರುವಾರ ಸಂಜೆಗೆ ನಿಗದಿಯಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.